ಮಂಗಳೂರು: ನಟ ಕಿರಣ್ ರಾಜ್ ಅಭಿನಯದ, ಗುರುತೇಜ್ ಶೆಟ್ಟಿ ನಿರ್ದೇಶನದ ‘ಸ್ಟಾರ್ ಕ್ರಿಯೇಷನ್ಸ್’ನ ‘ರಾನಿ’ ಕನ್ನಡ ಸಿನಿಮಾ ಸೆ. 12ರಂದು ಬಿಡುಗಡೆಯಾಗಲಿದೆ.
ಈ ಕುರಿತು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಗುರುತೇಜ್ ಶೆಟ್ಟಿ, ‘ರಾನಿ ದೊಡ್ಡ ಬಜೆಟ್ನಲ್ಲಿ ನಿರ್ಮಾಣವಾಗಿರುವ ಕೌಟುಂಬಿಕ ಮನರಂಜನಾ ಚಿತ್ರ. ಸಿನಿಮಾದಲ್ಲಿ ಮೂವರು ನಾಯಕಿಯರಿದ್ದಾರೆ. ಕರಾವಳಿ ಭಾಗದ ತಂತ್ರಜ್ಞರೇ ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಈ ಊರಿನವರೇ ಆದ ಮಣಿಕಾಂತ ಕದ್ರಿ ಸಂಗೀತ ನೀಡಿದ್ದಾರೆ. ನಿರ್ಮಾಪಕರಾದ ಚಂದ್ರಕಾಂತ ಪೂಜಾರಿ ಹಾಗೂ ಉಮೇಶ್ ಹೆಗ್ಡೆಯವರೂ ಕರಾವಳಿಯವರು. ಕರಾವಳಿಯ ಪ್ರೇಕ್ಷಕರು ಈ ಸಿನಿಮಾವನ್ನು ಗೆಲ್ಲಿಸಬೇಕು’ ಎಂದರು.
‘ಈ ಸಿನಿಮಾವನ್ನು ಆ. 30ರಂದು ಬಿಡುಗಡೆ ಮಾಡಲು ನಿರ್ಧರಿಸಿದ್ದೆವು. ಕನ್ನಡದ ‘ಕೃಷ್ಣಂ ಪ್ರಣಯ ಸಖಿ‘ ಹಾಗೂ ‘ಭೀಮ’ ಸಿನಿಮಾಗಳಿಗೆ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ ‘ರಾನಿ’ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆವು’ ಎಂದರು.
ನಾಯಕ ನಟ ಕಿರಣ್ ರಾಜ್, ‘ಕನ್ನಡ ಚಿತ್ರಮಂದಿರಗಳು ಮತ್ತೆ ಪ್ರೇಕ್ಷಕರಿಂದ ತುಂಬುತ್ತಿವೆ. ನಮ್ಮ ಸಿನಿಮಾ ಕೂಡಾ ಪ್ರೇಕ್ಷಕರನ್ನು ಇದೇ ರೀತಿ ರಂಜಿಸಲಿದೆ’ ಎಂದರು.
ಸಂಗೀತ ನಿರ್ದೇಶಕ ಮಣಿಕಾಂತ ಕದ್ರಿ, ‘ಮಂಗಳೂರಿನ ವಿಸ್ಮಯ ವಿನಾಯಕ, ಮೋಹನ್ ರಕ್ಷಿತಾ ಸುರೇಶ್ ಅವರು ಈ ಸಿನಿಮಾಕ್ಕಾಗಿ ಗೀತೆಗಳನ್ನು ಹಾಡಿದ್ದಾರೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಚಂದ್ರಕಾಂತ ಪೂಜಾರಿ ಹಾಗೂ ಉಮೇಶ್ ಹೆಗ್ಡೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.