ಮಂಗಳೂರು: ಸುರತ್ಕಲ್ ಜಂಕ್ಷನ್ ವೃತ್ತಕ್ಕೆ ವೀರ ಸಾವರ್ಕರ್ ಹೆಸರನ್ನು ಇಡುವ ಪ್ರಸ್ತಾವವನ್ನು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಸ್ಥಿರೀಕರಿಸಲಾಯಿತು.
ಈ ವೃತ್ತಕ್ಕೆ ಸಾವರ್ಕರ್ ಹೆಸರು ಇಡಲು ಕ್ರಮವಹಿಸುವಂತೆ ಶಾಸಕ ವೈ.ಭರತ ಶೆಟ್ಟಿ ಮನವಿ ಸಲ್ಲಿಸಿದ್ದರು. 2021ರ ಅ. 3ರಂದು ನಡೆದಿದ್ದ ಸಭೆಯಲ್ಲಿ ಪರಿಷತ್ತಿನ ಸಭೆಯಲ್ಲಿ ಈ ಕುರಿತ ಕಾರ್ಯಸೂಚಿಯನ್ನು ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿಯ ವರದಿಗಾಗಿ ಕಳುಹಿಸಿಕೊಡಲು ನಿರ್ಧರಿಸಲಾಗಿತ್ತು. ಆಗ ಪಾಲಿಕೆ ಸದಸ್ಯರಾದ ಎ.ಸಿ.ವಿನಯರಾಜ್, ಶಂಶಾದ್ ಅಬೂಬಕ್ಕರ್, ಮುನೀಬ್ ಬೆಂಗ್ರೆ ಹಾಗೂ ವರುಣ್ ಚೌಟ ಅವರು ಈ ಪ್ರಸ್ತಾವನೆಯನ್ನು ವಿರೋಧಿಸಿದ್ದರು. ಸ್ಥಾಯಿ ಸಮಿತಿಯು ಸ್ಥಳ ಪರಿಶೀಲನೆ ನಡೆಸಿ ಈ ಪ್ರಸ್ತಾವನೆಗೆ ಸಹಮತ ಸೂಚಿಸಿ ಪರಿಷತ್ತಿನ ಸಭೆಯಲ್ಲಿ ಮಂಡಿಸಿತ್ತು. ಸಮಿತಿಯಲ್ಲಿದ್ದ ಪಾಲಿಕೆ ಸದಸ್ಯರಾದ ಕೇಶವ ಹಾಗೂ ಶಂಶುದ್ದೀನ್ ಈ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಪಾಲಿಕೆಯು ಈ ಪ್ರಸ್ತಾವನೆ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ, ಸಾರ್ವಜನಿಕರಿಂದ ಆಕ್ಷೇಪಣೆ ಅಥವಾ ಸಲಹೆಗಳನ್ನು ಆಹ್ವಾನಿಸಿ ಬಳಿಕ ಅಂತಿಮ ನಿರ್ಣಯ ಕೈಗೊಳ್ಳಲಿದೆ.
ಕೆಲ ತಿಂಗಳುಗಳ ಹಿಂದೆ ಈ ಜಂಕ್ಷನ್ನಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಲಾಗಿತ್ತು. ಇದಕ್ಕೆ ಕೆಲವು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಪಾಲಿಕೆ ಅಧಿಕಾರಿಗಳು ಭಾವಚಿತ್ರವನ್ನು ತೆರವುಗೊಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.