ADVERTISEMENT

25 ವರ್ಷಗಳ ಅಕ್ರಮ ತನಿಖೆಯಾಗಲಿ: ಬಿ.ಕೆ.ಹರಿಪ್ರಸಾದ್

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 5:29 IST
Last Updated 23 ಸೆಪ್ಟೆಂಬರ್ 2024, 5:29 IST
ಬಿ.ಕೆ.ಹರಿಪ್ರಸಾದ್‌
ಬಿ.ಕೆ.ಹರಿಪ್ರಸಾದ್‌   

ಮಂಗಳೂರು:‘ರಾಜ್ಯದಲ್ಲಿ  25 ವರ್ಷದಿಂದ ಈಚೆಗೆ ಏನೇನು ಅಕ್ರಮಗಳಾಗಿವೆ ಎಂಬ ಬಗ್ಗೆ  ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯವರೇ ತನಿಖೆ ನಡೆಸಲಿ. ಯಾವುದೇ ಪಕ್ಷದವರು ಅಕ್ರಮ ನಡೆಸಿದ್ದರೂ ಬಯಲಾಗುತ್ತದೆ. ಯಾರು ಸತ್ಯ ಹರಿಶ್ಚಂದ್ರರು ಎಂಬುದೂ ಗೊತ್ತಾಗುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.

ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ನ್ಯಾ.ಕೆಂಪಣ್ಣ ಆಯೋಗದ ವರದಿಯ ವಿವರಗಳನ್ನು ಕೇಳಿರುವ ಕುರಿತು ಪ್ರತಿಕ್ರಿಯಿಸಿ ‘ಕೆಲವು ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇದೊಂದು ರೋಗವಾಗಿಬಿಟ್ಟಿದೆ. ಹಿಂದಿನ ಸರ್ಕಾರದಲ್ಲಿ ಏನೇನು ನಡೆದಿದೆ ಎಂಬುದನ್ನು ಬಿಜೆಪಿ ಕೆದಕಿಕೊಂಡು ಬರುತ್ತಿದೆ. ಬೊಫೋರ್ಸ್ ಹಗರಣದ ಬಗ್ಗೆ 30 ವರ್ಷಗಳಿಂದ ಹೇಳಿಕೊಂಡು ಬಂದಿದ್ದರು’ ಎಂದರು.

ಶಾಸಕ ಮುನಿರತ್ನ ನಾಯ್ಡು ಬಂಧನದ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದೊಂದು ದ್ವೇಷ ರಾಜಕಾರಣ ಎಂಬುದು ಬದಿಗಿರಲಿ. ಇಂತಹದ್ದು ಸಾಂಕ್ರಾಮಿಕ ರೋಗದ ತರಹ ನಡೆದುಕೊಂಡು ಬಂದಿರುವುದು ನರೇಂದ್ರ ಮೋದಿ‌ ಅವರಿಂದ. ಮೋದಿಯವರು ಗುಜರಾತ್‌ನಲ್ಲಿ ಸಂಜಯ್ ಜೋಷಿ‌ ಅವರ ಸಿ.ಡಿ‌ ಮಾಡಿಸಿ, ಆ ನಾಯಕನ ರಾಜಕೀಯ ನಿವೃತ್ತಿಗೆ ಕಾರಣರಾದರು. ಈಗ ಆ ರೋಗ ಇಡೀ ದೇಶಕ್ಕೆ ಹರಡಿದೆ’ ಎಂದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.