ಮಂಗಳೂರು: ‘ಅಟಲ್ ಪಿಂಚಣಿ ಯೋಜನೆ’ಯ ಸಮರ್ಪಕ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ನೀಡುವ 2021-22ನೇ ಸಾಲಿನ ‘ಎಪಿವೈ ರಾಷ್ಟ್ರೀಯ ಪ್ರಶಸ್ತಿ’ಯು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗೆ (ಎಸ್ಸಿಡಿಸಿಸಿ) ದೊರೆತಿದೆ.
ಗುರುವಾರ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಬಿ. ಅವರು ಎಪಿವೈ ರಾಷ್ಟ್ರೀಯ ಪ್ರಶಸ್ತಿಯನ್ನು ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರಿಂದ ಸ್ವೀಕರಿಸಿದರು.
ಭಾರತ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಕೋರಿಕೆಯಂತೆ ಎಸ್ಸಿಡಿಸಿಸಿ ಬ್ಯಾಂಕ್ 2019ರ ಜನವರಿ 11ರಂದು ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ನೋಂದಾಯಿತವಾಗಿದೆ. ಬ್ಯಾಂಕಿನ ಪ್ರತಿ ಶಾಖೆಗೆ ವಾರ್ಷಿಕವಾಗಿ ಅಟಲ್ ಪಿಂಚಣಿ ಯೋಜನೆಗೆ 20 ಚಂದಾದಾರರನ್ನು ನೋಂದಾಯಿಸುವ ಗುರಿ ನೀಡಲಾಗಿತ್ತು. 2019-20ರ ಆರ್ಥಿಕ ವರ್ಷದಲ್ಲಿ 466 ಚಂದಾದಾರರು ಆಗಿದ್ದರೆ, 2020-21ರಲ್ಲಿ ಈ ಸಂಖ್ಯೆ 942ಕ್ಕೆ ತಲುಪಿತು. 2021-22ರ ಆರ್ಥಿಕ ವರ್ಷದಲ್ಲಿ ಈ ಯೋಜನೆಯಲ್ಲಿ ಒಟ್ಟು 2,936 ಚಂದಾದಾರರ ನೋಂದಣಿಯೊಂದಿಗೆ ದಾಖಲೆ ನಿರ್ಮಿಸಿ, ಈ ಸಾಧನೆ ಮಾಡಿದ ರಾಜ್ಯದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಖ್ಯಾತಿಗೆ ಎಸ್ಸಿಡಿಸಿಸಿ ಬ್ಯಾಂಕ್ ಪಾತ್ರವಾಗಿದೆ.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಪ್ರತಿಮ್ ಬಂಡೋಪಾಧ್ಯಯ, ಪ್ರಾಧಿಕಾರದ ಅರ್ಥಶಾಸ್ತ್ರ ವಿಭಾಗದ ಸದಸ್ಯ ದೀಪಕ್ ಮೊಹಂತಿ, ಕಾರ್ಯನಿರ್ವಾಹಕ ನಿರ್ದೇಶಕ ಎ.ಜಿ.ದಾಸ್ ಹಾಗೂ ಮುಖ್ಯ ಮಹಾಪ್ರಬಂಧಕ ಆಶೀಶ್ ಕುಮಾರ್ ಇದ್ದರು ಎಂದು ಬ್ಯಾಂಕ್ನ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.