ADVERTISEMENT

ಎಸ್‌ಸಿಎಸ್‌ಪಿ– ಟಿಎಸ್‌ಪಿ ಯೋಜನೆ: ಶೇ 42ರಷ್ಟು ಅನುದಾನ ಬಳಕೆ– ಕೋಟ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 15:02 IST
Last Updated 2 ಡಿಸೆಂಬರ್ 2022, 15:02 IST
ಕೋಟ ಶ್ರೀನಿವಾಸ ಪುಜಾರಿ
ಕೋಟ ಶ್ರೀನಿವಾಸ ಪುಜಾರಿ   

ಮಂಗಳೂರು: ‘ರಾಜ್ಯದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆಯಡಿ (ಎಸ್‌ಸಿಎಸ್‌ಪಿ– ಟಿಎಸ್‌ಪಿ) 2022–23ನೇ ಸಾಲಿಗೆ ಸರ್ಕಾರ ₹ 29,165.81 ಕೋಟಿ ಹಂಚಿಕೆ ಮಾಡಿದೆ. ಅದರಲ್ಲಿ 2022ರ ನವೆಂಬರ್‌ ಅಂತ್ಯದವರೆಗೆ ₹13,702.45 ಕೋಟಿ ಬಿಡುಗಡೆಯಾಗಿದ್ದು, ₹12,227 ಕೋಟಿ ವೆಚ್ಚವಾಗಿದೆ’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಈ ವಿವರ ನೀಡಿದ ಅವರು, ‘ಹಂಚಿಕೆಯಾದ ಅನುದಾನದಲ್ಲಿ ನವೆಂಬರ್‌ ಅಂತ್ಯದವರೆಗೆ ಶೇ 42ರಷ್ಟು, ಬಿಡುಗಡೆಯಾದ ಅನುದಾನದಲ್ಲಿ ಶೇ 89ರಷ್ಟು ಬಳಕೆಯಾಗಿದೆ. ಇದುವರೆಗೆ ಯಾವ ವರ್ಷವೂ ಇಷ್ಟೊಂದು ಅನುದಾನ ಬಳಕೆಯಾಗಿರಲಿಲ್ಲ. ಅನುದಾನ ಬಳಕೆಗೆ 2023ರ ಮಾರ್ಚ್‌ವರೆಗೂ ಕಾಲಾವಕಾಶ ಇದೆ. ಆದರೂ, 2022ರ ಡಿಸೆಂಬರ್‌ ಒಳಗೆ ಪೂರ್ತಿ ಅನುದಾನ ಬಳಸುವಂತೆ ಇಲಾಖೆಗಳಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

ಎಸ್‌ಸಿಎಸ್‌ಪಿ– ಟಿಎಸ್‌ಪಿ ಅನುದಾನದಲ್ಲಿ ಅಕ್ಟೋಬರ್‌ ಅಂತ್ಯದವರೆಗೆ ಶೇ 14.75ರಷ್ಟು ಮಾತ್ರ ಬಳಕೆಯಾದ ಬಗ್ಗೆ ‘ಪ್ರಜಾವಾಣಿ’ಯು ಡಿ.1ರ ಸಂಚಿಕೆಯಲ್ಲಿ ‘ದಲಿತ ಕಲ್ಯಾಣ– ಖರ್ಚಾಗದ ಹಣ’ ಶೀರ್ಷಿಕೆಯಡಿ ವಿಶೇಷ ವರದಿಯನ್ನು ಪ್ರಕಟಿಸಿ ಗಮನ ಸೆಳೆದಿತ್ತು.

ADVERTISEMENT

‘ಪ್ರಜಾವಾಣಿ’ಯ ವಿಶೇಷ ವರದಿಯನ್ನು ಉಲ್ಲೇಖಿಸಿದ ಸಚಿವರು, ‘ಅದರಲ್ಲಿ ಪ್ರಕಟವಾಗಿರುವುದಕ್ಕಿಂತಲೂ ಹೆಚ್ಚು ಅನುದಾನ ಬಳಕೆ ಆಗಿದೆ. ಅನುದಾನದಲ್ಲಿ ಕೃಷಿ ಇಲಾಖೆಯಲ್ಲಿ ಶೇ 14, ಅರಣ್ಯ ಇಲಾಖೆಯಲ್ಲಿ ಶೇ 12, ಉನ್ನತ ಶಿಕ್ಷಣ ಇಲಾಖೆಯಲ್ಲಿ ಶೇ 6, ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ ಶೇ 18 ಹಾಗೂ ಕೌಶಲಾಭಿವೃದ್ಧಿ ಇಲಾಖೆಯಲ್ಲಿ ಶೇ 5ರಷ್ಟು ಅನುದಾನ ಮಾತ್ರ ಬಳಕೆ ಆಗಿರುವುದು ನಿಜ. ನಿರೀಕ್ಷಿತ ಪ್ರಗತಿ ಸಾಧಿಸದ ಇಲಾಖೆಗಳ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲು ಹಾಗೂ ಅಂತಹ ಇಲಾಖೆಗಳ ಅನುದಾನವನ್ನು ಹೆಚ್ಚುವರಿ ಅನುದಾನ ಕೋರಿರುವ ಇಲಾಖೆಗಳಿಗೆ ಮರುಹಂಚಿಕೆಗೆ ಗುರುವಾರ ನಡೆದ ನೋಡಲ್‌ ಏಜೆನ್ಸಿ ಸಭೆಯಲ್ಲಿ ನಿರ್ಧರಿಸಿದ್ದೇವೆ’ ಎಂದರು.

‘ಈ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಿಗೆ ಕೆಟಿಟಿಪಿ ಕಾಯ್ದೆಯ ಸೆಕ್ಷನ್‌ 4 ಜಿ ಅಡಿ ವಿನಾಯಿತಿ ನೀಡುವುದನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದೇವೆ’ ಎಂದು ತಿಳಿಸಿದರು.

ಮರಕ್ಕೆ ಕಟ್ಟಿಹಲ್ಲೆ, ಕ್ರಮಕ್ಕೆ ಸೂಚನೆ:ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದರಿಂದ ಮನನೊಂದು, ಕೋಲಾರ ಜಿಲ್ಲೆಯ ಪರಿಶಿಷ್ಟ ಜಾತಿಯ ಯುವಕ ಉದಯ್‌ ಕಿರಣ್‌ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆಯನ್ನು ಸಚಿವರು ಖಂಡಿಸಿದರು.

‘ಈ ಪ್ರಕರಣದಲ್ಲಿ ತಪ್ಪಿತಸ್ಥರು ಎಷ್ಟೇ ಬಲಾಢ್ಯರಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು ಎಂದು ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಸೂಚನೆ ನೀಡಿದ್ದೇನೆ. ಸಂತ್ರಸ್ತನ ಕುಟುಂಬದವರನ್ನು ಶೀಘ್ರವೇ ಭೇಟಿ ಮಾಡುತ್ತೇನೆ’ ಎಂದರು.

‘ಹಿಂದುಳಿದ ವರ್ಗಗಳ ಇಲಾಖೆಯ ಎಲ್ಲ ವಿದ್ಯಾರ್ಥಿನಿಲಯಗಳಿಗೆ ಹೊಸ ದಿಂಬು ಹಾಗೂ ಹಾಸಿಗೆ ಖರೀದಿಸಲು ಸರ್ಕಾರ ₹ 100 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದೆ’ ಎಂದು ಮಾಹಿತಿ ನೀಡಿದರು.

‘ಶಿಕ್ಷಣ ಕೇಂದ್ರಗಳಾಗಿ ಬೆಳೆದಿರುವ ಮಂಗಳೂರು, ಕಲಬುರಗಿ, ಬೆಳಗಾವಿ, ಮೈಸೂರು ಹಾಗೂ ಬೆಂಗಳೂರಿನಲ್ಲಿ ದೀನದಯಾಳ್ ವಿದ್ಯಾರ್ಥಿನಿಲಯ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಪರಿಶಿಷ್ಟ ಸಮುದಾಯ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಸೇರಿದಂತೆ ಪ್ರತಿ ಹಾಸ್ಟೆಲ್‌ನಲ್ಲಿ 1 ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲಿದ್ದೇವೆ’ ಎಂದರು.

‘ಪಂಡಿತ ದೀನದಯಾಳ್‌ ಸೌಹಾರ್ದ ವಿದ್ಯಾರ್ಥಿನಿಲಯ ಸ್ಥಾಪನೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸ್ಥಳ ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರವೇ ಈ ವಿದ್ಯಾರ್ಥಿನಿಲಯ ಕಾರ್ಯಾರಂಭ ಮಾಡಲಿದೆ. ವಿವಿಧ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಆಧರಿಸಿ 600 ಪುರುಷರಿಗೆ ಹಾಗೂ 400 ಮಹಿಳೆಯರಿಗೆ ಈ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಕಲ್ಪಿಸುವ ಉದ್ದೇಶ ಇದೆ. ಒಂದೇ ಕಡೆ ಜಾಗ ಲಭ್ಯವಾಗದಿದ್ದರೆ ಎರಡು– ಮೂರು ಕಡೆ ವಿದ್ಯಾರ್ಥಿನಿಲಯ ಸ್ಥಾಪಿಸಲಿದ್ದೇವೆ' ಎಂದು ತಿಳಿಸಿದರು.

‘ಹಿಂದುಳಿದ ವರ್ಗಗಳ ಇಲಾಖೆಯ ವಿದ್ಯಾರ್ಥಿನಿಲಯಗಳಿಗೆ ಪ್ರವೇಶಾವಕಾಶ ಸಿಗದ 1.20 ಲಕ್ಷ ವಿದ್ಯಾರ್ಥಿಗಳು ವಿದ್ಯಾಸಿರಿ ಯೋಜನೆ ಅಡಿ ಅರ್ಜಿ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳಿಂದ ಬಂದಿರುವ ಬೇಡಿಕೆಯನ್ನು ಪರಿಗಣಿಸಿ, ಅವಕಾಶ ಇರುವ ಕಡೆ ನಿಲಯಗಳಲ್ಲಿ ನಿಗದಿತ ಸಂಖ್ಯೆಗಿಂತ ಶೇ 25ರಷ್ಟು ಹೆಚ್ಚು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಸೂಚನೆ ನೀಡಿದ್ದೇವೆ. ಇದರಿಂದ ಸುಮಾರು 30 ಸಾವಿರ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಕರ್ಯ ಸಿಗಲಿದೆ’ ಎಂದು ಸಚಿವರು ತಿಳಿಸಿದರು.

‘ಕನಕದಾಸ ವಿದ್ಯಾರ್ಥಿನಿಲಯ ಹಾಗೂ ಬಾಬಾ ಸಾಹೇಬ್‌ ಅಂಬೇಡ್ಕರ್‌ ವಿದ್ಯಾರ್ಥಿನಿಲಯಗಲೂ ಶೀಘ್ರವೇ ಕಾರ್ಯಾರಂಭ ಮಾಡಲಿದ್ದು, ಇನ್ನು ಒಂದು ವರ್ಷದೊಳಗೆ ವಿದ್ಯಾರ್ಥಿನಿಲಯಗಳ ಕೊರತೆ ಬಹುತೇಕ ನೀಗಲಿದೆ’ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಮೂರು ಕಡೆ ಸೈನಿಕ ತರಬೇತಿ ಶಾಲೆಗಳು ಕಾರ್ಯಾರಂಭ ಮಾಡಿ‌ವೆ. ಅಧಿಕೃತ ಉದ್ಘಾಟನೆಯಷ್ಟೇ ಬಾಕಿ ಇದೆ. ಪ್ರತಿ ತಂಡದಲ್ಲಿ 100 ವಿದ್ಯಾರ್ಥಿಗಳಿಗೆ ನಾಲ್ಕು ತಿಂಗಳ ತರಬೇತಿ ನೀಡುವ ಉದ್ದೇಶವಿತ್ತು. ಆದರೆ, 55ರಿಂದ 60 ಮಂದಿ ಮಾತ್ರ ಹೆಸರು ನೋಂದಾಯಿಸಿದ್ದಾರೆ’ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾವೂರಿನಲ್ಲಿ ಕೊರಗರಿಗೆ ಹಂಚಿಕೆ ಮಾಡಲು ಕಾಯ್ದಿರಿಸಿದ ನಿವೇಶನಗಳ ಹಕ್ಕುಪತ್ರ ವಿತರಿಸದಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಈ ವಿಚಾರ ಗಮನಕ್ಕೆ ಬಂದಿದೆ. ಪಾಲಿಕೆಯಿಂದ ಈ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮಕೈಗೊಳ್ಳುತ್ತೇನೆ‘ ಎಂದರು.

–0–

‘ಮಂಗಳೂರಿನಲ್ಲಿ ಟೈಲರ್‌ಗಳ ಸಮಾವೇಶ’

‘ವಿದ್ಯಾನಿಧಿ’ ಯೋಜನೆಯನ್ನು ಟೈಲರ್‌ಗಳ ಮಕ್ಕಳಿಗೂ ವಿಸ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಬಿನಂದನೆ ಸಲ್ಲಿಸಲು ನಗರದಲ್ಲಿ ಟೈಲರ್‌ಗಳ ಭಾರಿ ಸಮಾವೇಶವನ್ನು ಏರ್ಪಡಿಸಲಾಗುತ್ತದೆ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

‘ರಾಜ್ಯದಲ್ಲಿ 12 ಲಕ್ಷಕ್ಕೂ ಅಧಿಕ ಟೈಲರ್‌ಗಳಿದ್ದಾರೆ. ಇಎಸ್ಐ, ಪಿಎಫ್ ಮತ್ತಿತರ ಸೌಲಭ್ಯಗಳಿಂದ ವಂಚಿತರಾಗಿರುವ ತಮಗೂ ಜೀವನ ಭದ್ರತೆ ಕಲ್ಪಿಸಬೇಕು. ಕಟ್ಟಡ ಕಾರ್ಮಿಕರಿಗ ಸಿಗುವ ಸವಲತ್ತುಗಳು ತಮಗೂ ಸಿಗಬೇಕು ಎಂಬುದು ಅವರ ಬೇಡಿಕೆ. ಈ ಬಗ್ಗೆಯೂ ಮುಖ್ಯಮಂತ್ರಿಯವರ ಗಮನ ಸೆಳೆಯುವುದು ಈ ಸಮಾವೇಶದ ಉದ್ದೇಶ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.