ಮಂಗಳೂರು: ಸಾಮಾಜಿಕ ಮಾಧ್ಯಮಗಳ ಮೂಲಕ ತಮಗೆ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಎಸ್ಡಿಪಿಐ ರಾಜ್ಯ ಘಟಕದ ಕಾರ್ಯದರ್ಶಿ ರಿಯಾಜ್ ಕಡಂಬು ದೂರು ನೀಡಿದ್ದು ನಗರದ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎಫ್ಐಅರ್ ದಾಖಲಾಗಿದೆ.
ಪತ್ರಿಕೆಯೊಂದರ ಯೂಟ್ಯೂಬ್ ಚಾನೆಲ್ನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಕುರಿತು ಪ್ರಕಟವಾದ ಸುದ್ದಿಗೆ ಕೆಆರ್.ರಾಕೇಶ್9456 ಹೆಸರಿನ ಖಾತೆಯ ಬಳಕೆದಾರ 'ನೆಕ್ಸ್ಟ್ ಈಸ್ ರಿಯಾಜ್ ಕಡಂಬು' ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಂದು ಪತ್ರಿಕೆಯ ಯೂಟ್ಯೂಬ್ ಚಾನೆಲ್ನಲ್ಲಿ ಸುಹಾಸ್ ಶೆಟ್ಟಿ ಅಂತ್ಯಕ್ರಿಯೆ ಸುದ್ದಿ ಪ್ರಸಾರದ ನೇರ ಪ್ರಸಾರವಾಗುವಾಗಲೂ ಕೆ.ಆರ್.ರಾಕೇಶ್ ಎಂಬ ವ್ಯಕ್ತಿ 'ಹಿಟ್ ಲಿಸ್ಟ್ 'ಎಂದು ಬೆದರಿಕೆಯ ಕಮೆಂಟ್ ಹಾಕಿದ್ದಾರೆ ಎಂದು ರಿಜಾಯ್ ಕಡಂಬು ದೂರು ನೀಡಿದ್ದಾರೆ. ಇದನ್ನು ಆಧರಿಸಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್192 (ಗಲಭೆ ಸೃಷ್ಟಿಗೆ ಪ್ರಚೋದನೆ ನೀಡುವುದುಉದ್ದೇಶದಿಂದ ಬೆದರಿಕೆ), ಸೆಕ್ಷನ್ 351 (4), (ಕ್ರಿಮಿನಲ್ ಬೆದರಿಕೆಯ ಸಂದೇಶ) 353 (2) (ಧರ್ಮ ಆಧಾರದಲ್ಲಿ ವಿದ್ಯುನ್ಮಾನ ಮಾಧ್ಯಮದ ಮೂಲಕ ಸುಳ್ಳು ಮಾಹಿತಿ ಹಂಚಿಕೊಳ್ಳುವುದು)ಅಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.