ADVERTISEMENT

ಪೌರತ್ವ ತಿದ್ದುಪಡಿ ಮಸೂದೆಗೆ ಖಂಡನೆ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 10:17 IST
Last Updated 7 ಡಿಸೆಂಬರ್ 2019, 10:17 IST

ಮಂಗಳೂರು: ‘ಕೇಂದ್ರ ಸರ್ಕಾರವು ಮಂಡಿಸಿರುವ ಪೌರತ್ವ ತಿದ್ದುಪಡಿ ಮಸೂದೆಯು ಭಾರತೀಯ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ’ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಟುವಾಗಿ ಖಂಡಿಸಿದೆ.

ಈ ಬಗ್ಗೆ ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ‘ಬಾಂಗ್ಲಾದೇಶ, ಅಫ್ಗಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದೆ. 1955ರಪೌರತ್ವ ಕಾಯ್ದೆ ಅನುಸಾರ,ಅಫ್ಗಾನಿಸ್ಥಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದು, ಸಿಖ್‌, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮೀಯ ವಲಸಿಗರು ಭಾರತದಲ್ಲಿ 12 ಅಥವಾ ಅದಕ್ಕಿಂತ ಹೆಚ್ಚು ವರ್ಷ ವಾಸವಿದ್ದಲ್ಲಿ ಮಾತ್ರ ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿದ್ದಾರೆ. ಈ ತಿದ್ದುಪಡಿ ಪ್ರಕಾರ 6 ವರ್ಷ ವಾಸವಿದ್ದರೆ ಪೌರತ್ವ ಪಡೆಯಲು ಅರ್ಹರಾಗುತ್ತಾರೆ’ ಎಂದು ಹೇಳಿದರು.

‘ಆದರೆ, ತಿದ್ದುಪಡಿಯಲ್ಲಿ ಮುಸ್ಲಿಮರನ್ನು ಹೊರತುಪಡಿಸಿರುವುದು ಸಂವಿಧಾನದ ಸಮಾನ ಹಕ್ಕುಗಳ ಆಶಯಕ್ಕೆ ವಿರುದ್ಧವಾಗಿದೆ. ಇದು ಮುಸ್ಲಿಮರನ್ನು ನಿರ್ಬಂಧಿಸುವ ಹಾಗೂ ಜಾತ್ಯತೀತ ಭಾರತವನ್ನು ಕೋಮು ಆಧಾರಿತ ರಾಷ್ಟ್ರ ಮಾಡುವ ಷಡ್ಯಂತ್ರವಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಅಸ್ಸಾಂ ಹಾಗೂ ಈಶಾನ್ಯ ಭಾಗದ ರಾಜ್ಯಗಳ ಜನರು ಈ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಸ್ಸಾಂನಲ್ಲಿ ಎನ್‌.ಆರ್.ಸಿ. (ರಾಷ್ಟ್ರೀಯ ನಾಗರಿಕರ ದಾಖಲೆ)ಯನ್ನು ಸುಮಾರು 62 ಸಾವಿರ ಮಾನವ ದಿನಗಳು ಹಾಗೂ ₹ 1,600 ಕೋಟಿ ಖರ್ಚು ಮಾಡಿ ಮಾಡಿದರು. ಇದರನ್ವಯ ಅಲ್ಲಿರುವ 19 ಲಕ್ಷ ಜನರನ್ನು ಹೊರಗಿಡಲಾಯಿತು. ಈ ಪೈಕಿ 14 ಲಕ್ಷಕ್ಕಿಂತಲೂ ಹೆಚ್ಚು ಮುಸ್ಲಿಮೇತರರೇ ಇದ್ದಾರೆ’ ಎಂದು ಅವರು ವಿವರಿಸಿದರು.

‘ಅಫ್ಗಾನಿಸ್ತಾನ, ಬಾಂಗ್ಲಾ, ಪಾಕಿಸ್ತಾನದಲ್ಲಿನ ನಿರಾಶ್ರಿತರಿಗೆ ಪೌರತ್ವ ನೀಡುತ್ತಾರೆ. ಆದರೆ, ಮ್ಯಾನ್‌ಮಾರ್‌ ನಿರಾಶ್ರಿತರು ಮುಸ್ಲಿಮರಾದ ಕಾರಣ ಪೌರತ್ವದಿಂದ ವಂಚಿಸಲಾಗಿದೆ. ಇದು ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಕುತಂತ್ರ’ ಎಂದು ಟೀಕಿಸಿದರು.

ಅಯೋಧ್ಯೆ ‘ಅನ್ಯಾಯ’: ‘27 ವರ್ಷ ಕಳೆದರೂ ಅಯೋಧ್ಯಾ ಪ್ರಕರಣದಲ್ಲಿ ಸಮರ್ಪಕ ನ್ಯಾಯ ಸಿಗದೇ ಇರುವುದು ವಿಪರ್ಯಾಸ. ಸಾಕ್ಷಿ, ದಾಖಲೆಗಳನ್ನು ಪರಿಶೀಲಿಸಿದ ಬಳಿಕವೂ ಸುಪ್ರೀಂ ಕೋರ್ಟ್ ಬಾಬರಿ ಮಸೀದಿ ಜಾಗವನ್ನು ರಾಮಲಲ್ಲಾಗೆ ನೀಡಿರುವುದ ಅನ್ಯಾಯ. ತೀರ್ಪು ಏಕಪಕ್ಷೀಯವಾಗಿದ್ದು, ಬಾಬರಿ ಧ್ವಂಸ ಪ್ರಕರಣದಲ್ಲಿ ಲಿಬರ್‍ಹಾನ್ ಆಯೋಗ ಹೆಸರಿಸಿದ 68 ಆರೋಪಿಗಳಿಗೂ ಶಿಕ್ಷೆ ನೀಡಿಲ್ಲ’ ಎಂದು ದೂರಿದರು.

ಜಿಲ್ಲಾ ಪೊಲೀಸರ ಕ್ರಮಕ್ಕೆ ಖಂಡನೆ: ‘ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಮುಸ್ಲಿಂ ವಿರೋಧಿ ನಿಲುವು ಅನುಸರಿಸುತ್ತಿದ್ದಾರೆ’ ಎಂದು ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ದೂರಿದರು.

‘ಬಾಬರಿ ಮಸೀದಿ ಧ್ವಂಸ ಹಾಗೂ ಜಾಗವನ್ನು ರಾಮಲಲ್ಲಾಗೆ ನೀಡಿದ ವಿಚಾರದಲ್ಲಿ ನ್ಯಾಯ ಕೋರಿ ಪ್ರತಿಭಟನಾ ಪ್ರದರ್ಶನ ನಡೆಸಲು ನಮಗೆ ಅವಕಾಶ ನೀಡಲಿಲ್ಲ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಲು ಎರಡು ಬಾರಿ ಉದ್ದೇಶಿಸಿದ್ದರೂ, ಅನುಮತಿ ನಿರಾಕರಿಸಿದರು’ ಎಂದರು.

‘ಆದರೆ, ಇದೇ ಸಂದರ್ಭದಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ಆರೋಪಿಗಳನ್ನು ಕಲ್ಲಡ್ಕ, ರಥಬೀದಿ ಮತ್ತಿತರೆಡೆಗಳಲ್ಲಿ ಸನ್ಮಾನಿಸಿದ್ದಾರೆ. ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಸೆಕ್ಷನ್‌ 144 ಜಾರಿಯಲ್ಲಿ ಇದ್ದಾಗಲೇ ಕಾರ್ಯಕ್ರಮ ಕೈಗೊಂಡವರ ಬಗ್ಗೆಯೂ ಕ್ರಮಕೈಗೊಂಡಿಲ್ಲ. ಜಿಲ್ಲಾ ಪೊಲೀಸರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ’ ಎಂದು ಅವರು ಆಪಾದಿಸಿದರು.

ಎಸ್‌ಡಿಪಿಐ ರಾಜ್ಯ ಘಟಕದ ಕಾರ್ಯದರ್ಶಿ ಅಶ್ರಫ್ ಮಾಚಾರ್, ಜಿಲ್ಲಾ ಘಟಕದ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಮುನೀಬ್ ಬೆಂಗ್ಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.