ADVERTISEMENT

ಹಾಲಿ ನ್ಯಾಯಮೂರ್ತಿಯಿಂದ ತನಿಖೆಗೆ ಆಗ್ರಹ

ಮಂಗಳೂರು ಪೊಲೀಸ್ ಗೋಲಿಬಾರ್: ಮಾಜಿ ಸಚಿವ ರಮಾನಾಥ ರೈ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 13:01 IST
Last Updated 31 ಡಿಸೆಂಬರ್ 2019, 13:01 IST
ಮಂಗಳೂರಿನಲ್ಲಿ ಮಂಗಳವಾರ ಜಾತ್ಯತೀತ ಪಕ್ಷ ಹಾಗೂ ಸಂಘಟನೆಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿದರು
ಮಂಗಳೂರಿನಲ್ಲಿ ಮಂಗಳವಾರ ಜಾತ್ಯತೀತ ಪಕ್ಷ ಹಾಗೂ ಸಂಘಟನೆಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿದರು   

ಮಂಗಳೂರು: ನಗರದಲ್ಲಿ ಡಿ.19ರಂದು ನಡೆದ ಪೊಲೀಸ್ ಗೋಲಿಬಾರ್ ಹಾಗೂ ಘರ್ಷಣೆಯ ಪ್ರಕರಣದ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಇದೇ 2ರಂದು ಸಾಮೂಹಿಕ ಧರಣಿ ನಡೆಸಲು ದಕ್ಷಿಣ ಕನ್ನಡ ಜಿಲ್ಲೆಯ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳು ನಿರ್ಧರಿಸಿವೆ.

‘ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ಪುರಭವನದ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿ ಜಾತ್ಯತೀತ ಪಕ್ಷಗಳು, ಸಂಘಟನೆಗಳ ಆಶ್ರಯದಲ್ಲಿ ಸಾಮೂಹಿಕ ಧರಣಿ ನಡೆಸಲು ನಿರ್ಧರಿಸಲಾಗಿದೆ’ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಜಿಲ್ಲೆಯ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ನಿಯೋಗದ ವತಿಯಿಂದ ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಾಠಿಚಾರ್ಜ್, ಗೋಲಿಬಾರ್‌ಗೆ ಕಾರಣರಾದ ಪೊಲೀಸ್‌ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಗೋಲಿಬಾರ್‌ಗೆ ಬಲಿಯಾದ ಇಬ್ಬರು ಅಮಾಯಕರ ಕುಟುಂಬಕ್ಕೆ ಸರ್ಕಾರ ಘೋಷಿಸಿದ ಪ್ರಕಾರವೇ ಪರಿಹಾರ ನೀಡಬೇಕು. ಗೋಲಿಬಾರ್‌ನಲ್ಲಿ ಗಾಯಗೊಂಡವರಿಗೂ ಪರಿಹಾರ ನೀಡಬೇಕು. ಕಲ್ಲು ತೂರಾಟ, ಹಿಂಸಾಚಾರ ಪ್ರಕರಣವನ್ನು ಮುಂದಿಟ್ಟು, ಬಂಧಿಸಲಾಗಿರುವ ಅಮಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಪೌರತ್ವ ನೋಂದಣಿ ಕಾಯಿದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧದ ಪ್ರತಿಭಟನೆಗಳಿಗೆ ಅನುಮತಿ ನೀಡಲು ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಅನುಸರಿಸಿದ ತಾರತಮ್ಯ ನೀತಿ ಹಾಗೂ ಅನಗತ್ಯವಾಗಿ ನಿಷೇಧಾಜ್ಞೆ ಹೇರಿರುವುದೇ ಗೊಂದಲಗಳಿಗೆ ಕಾರಣವಾಗಿತ್ತು.

‘ರಾಜ್ಯದ ಇತರ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ನಡೆದ ಪ್ರತಿಭಟನೆಗಳನ್ನು ಪೊಲೀಸ್ ಇಲಾಖೆ ಶಾಂತಿಯುತವಾಗಿ ನಿರ್ವಹಸಿದೆ. ಮಂಗಳೂರಿನಲ್ಲಿ ಮಾತ್ರ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಲಾಗಿದೆ. ಇದೇ ಅಹಿತಕರ ಘಟನೆಗಳಿಗೆ ಕಾರಣವಾಯಿತು’ ಎಂದರು.

ಗೋಲಿಬಾರ್ ನಡೆದ ಬಳಿಕ ಮಂಗಳೂರು ಪೊಲೀಸ್‌ ಕಮಿಷನರ್ ಡಾ.ಹರ್ಷ ನೀಡಿದ ಪ್ರತಿಭಟನಾಕಾರರ ಸಂಖ್ಯೆ, ಲೂಟಿಗೆ ಯತ್ನ ಮುಂತಾದ ತಪ್ಪಾದ ಮಾಹಿತಿಗಳು, ಆಯ್ದ ಸಿಸಿ ಕೆಮರಾ ಫೂಟೇಜ್‌ಗಳನ್ನು ಮಾತ್ರ ಬಹಿರಂಗಪಡಿಸಿರುವುದು ಅನುಮಾನಕ್ಕೆ ಎಡೆಮಾಡಿದೆ ಎಂದು ದೂರಿದರು.

‘ಈ ಪ್ರಕರಣದಲ್ಲಿ ವಿರೋಧ ಪಕ್ಷಗಳ ಪಾತ್ರ ಇದೆ’ ಎಂದು ಮುಖ್ಯಮಂತ್ರಿಗಳು, ಗೃಹಸಚಿವರು ಆರೋಪ ಮಾಡಿದ್ದಾರೆ. ಹೀಗಾಗಿ, ಯಾರೇ ತಪ್ಪಿತಸ್ಥರು ಇದ್ದರೂ, ಸರಿಯಾದ ಶಿಕ್ಷೆಯಾಗಬೇಕು ಎಂಬ ಉದ್ದೇಶದಿಂದ ಈ ಪ್ರಕರಣವನ್ನು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ಒಳಪಡಿಸಬೇಕು ಎಂಬುದು ನಮ್ಮೆಲ್ಲರ ಆಗ್ರಹ’ ಎಂದು ವಿವರಿಸಿದರು.

ಮಾಜಿ ಸಚಿವ ಅಭಯಚಂದ್ರ ಜೈನ್, ಸಿಪಿಎಂ ರಾಜ್ಯ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಕಾಂಗ್ರೆಸ್ ಮುಖಂಡ ಪಿ.ವಿ. ಮೋಹನ್, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ರವಿ ಕಿರಣ ಪುಣಚ, ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಚಾಲಕ ರಘು ಎಕ್ಕಾರು, ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಮುನೀರ್ ಕಾಟಿಪಳ್ಳ, ಪ್ರಮುಖರಾದ ಯಾದವ ಶೆಟ್ಟಿ, ಎಸ್.ಪಿ. ರಾವ್, ಕರುಣಾಕರ್, ಸಂತೋಷ್ ಬಜಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.