ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಐದು ತಿಂಗಳ ಬಳಿಕ ಸೋಮವಾರ (ಇದೇ 14)ದಿಂದ ಸರ್ಪಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಸೇರಿದಂತೆ ವಿವಿಧ ಸೇವೆಗಳು ಆರಂಭವಾಗಲಿವೆ.
ಸೇವಾರ್ಥಿಗಳಿಗೆ ಭೋಜನ ಪ್ರಸಾದ ವಿತರಣೆಯಾಗಲಿದೆ. ಬೆಳಿಗ್ಗೆ 6.30ರಿಂದ ಮದ್ಯಾಹ್ನ 1.30ರ ವರೆಗೆ, ಮಧ್ಯಾಹ್ನ 3.30ರಿಂದ ರಾತ್ರಿ 8 ಗಂಟೆಯವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ದಿನಕ್ಕೆ 30 ಭಕ್ತರಿಗೆ ಮಾತ್ರ ಸರ್ಪಸಂಸ್ಕಾರ ಹಾಗೂ ಆಶ್ಲೇಷ ಬಲಿ ಸೇವೆ ನೆರವೇರಿಸಲು ಅವಕಾಶವಿದೆ. ಪ್ರತಿ ರಸೀದಿಗೆ ಇಬ್ಬರು ಸೇವೆಯಲ್ಲಿ ಭಾಗವಹಿಸಬಹುದು. ಬೆಳಿಗ್ಗೆ ಮಾತ್ರ ಆಶ್ಲೇಷ ಬಲಿ ಸೇವೆ ಇರಲಿದೆ. ಮಹಾಪೂಜೆ, ಪಂಚಾಮೃತ ಸೇವೆಗಳಿಗೆ ದಿನಕ್ಕೆ 10 ರಸೀದಿ ಇರಲಿದ್ದು, ತಲಾ ಇಬ್ಬರು ಭಾಗವಹಿಸಬಹುದು.
ದೇವಳದ ವಸತಿಗೃಹದಲ್ಲಿ ಸರ್ಪ ಸಂಸ್ಕಾರ ಸೇವಾರ್ಥಿಗಳಿಗೆ 2 ದಿನ, ಉಳಿದ ಸೇವೆ ಮಾಡಿಸುವ ಭಕ್ತರಿಗೆ ಒಂದು ದಿನ ತಂಗಲು ಅವಕಾಶ ಕಲ್ಪಿಸಲಾಗುವುದು. ಕೋವಿಡ್ ಮಾರ್ಗಸೂಚಿಯಿಂತೆ ಸ್ಯಾನಿಟೈಸೇಶನ್, ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು. ವಸತಿ ಗೃಹದ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿದ ಬಳಿಕವೇ ಮುಂದಿನ ಸೇವಾರ್ಥಿಗಳಿಗೆ ನೀಡಲಾಗುವುದು ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.