ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಅವರು ಏಳು ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ಅನ್ನು ಸೋಮವಾರ ಪ್ರಾರಂಭಿಸಿದರು.
ಎಜೆ ಆಸ್ಪತ್ರೆಯ ಕಾರ್ಡಿಯಾಲಾಜಿಸ್ಟ್ ಡಾ. ಬಿ.ವಿ. ಮಂಜುನಾಥ್ ಅವರು ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತಾಡಿದ ಅವರು, ‘ಕೋವಿಡ್ ಬಾಧಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಜನರು ಜಾಗರೂಕರಾಗಿ ಇರಬೇಕು. ತುರ್ತು ಸಂದರ್ಭದಲ್ಲಿ ಅವಶ್ಯ ಇರುವ ಆಮ್ಲಜನಕ ಹಾಸಿಗೆ ಸಹಿತ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಲು ಮೊಹಿಯುದ್ದೀನ್ ಬಾವಾ ಕೈಗೊಂಡ ಕ್ರಮ ಶ್ಲಾಘನೀಯ. ಮನೆಯಲ್ಲಿ ಒಬ್ಬರಿಗೆ ಕೋವಿಡ್ ತಗುಲಿದರೆ, ಅದು ಇತರರಿಗೂ ಹರಡುವ ಸಾಧ್ಯತೆ ಇದೆ. ಕೋವಿಡ್ ಕೇರ್ ಸೆಂಟರ್ನಲ್ಲಿ ಅವರಿಗೆ ಪ್ರತ್ಯೇಕವಿಟ್ಟು ಚಿಕಿತ್ಸೆ ನೀಡಬಹುದು’ ಎಂದರು.
‘ಜನರ ಪ್ರಾಣ ಉಳಿಸುವ ನಿಟ್ಟಿನಲ್ಲಿ ಕೋವಿಡ್ ಕೇರ್ ಸೆಂಟರ್ ನನ್ನ ಸಣ್ಣ ಪ್ರಯತ್ನ. ಇದರಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬೆರೆಸಬೇಡಿ. ಇಲ್ಲಿ ಯಾವುದೇ ಜಾತಿ, ಧರ್ಮದ ವಿಚಾರಕ್ಕೆ ಅವಕಾಶವಿಲ್ಲ. ಸ್ಥಳೀಯ ಮಸೀದಿ, ಸಮುದಾಯ ಭವನ, ಸಂಘ–ಸಂಸ್ಥೆಗಳು ನೀಡಿದ ಸ್ಥಳದಾನದಲ್ಲಿ ನನ್ನ ವೈಯಕ್ತಿಕ ಖರ್ಚಿನಿಂದ ಹಾಸಿಗೆ, ಆಮ್ಲಜನಕ, ವೈದ್ಯರು, ನರ್ಸ್, ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಎಲ್ಲವನ್ನೂ ಒದಗಿಸಿದ್ದೇನೆ. ಇಲ್ಲಿ ಬರುವ ಜನರು ಶೀಘ್ರ ಗುಣಮುಖರಾಗಿ ಮನೆಗಳಿಗೆ ತೆರಳುವಂತಾದರೆ ನನ್ನ ಶ್ರಮ ಸಾರ್ಥಕ. ಸಮಾಜಸೇವೆ ಮಾಡಲು ಅಧಿಕಾರ ಬೇಕೆಂದಿಲ್ಲ. ತುರ್ತು ಸಂದರ್ಭದಲ್ಲಿ ಸಹಾಯಕ್ಕೆ ಬರಲು ವಾರಿಯರ್ಸ್ ನೇಮಿಸಿದ್ದೇನೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಮೊಹಿಯುದ್ದೀನ್ ಬಾವಾ ಹೇಳಿದರು.
ಕಾಟಿಪಳ್ಳ ಬದ್ರಿಯಾ ಜುಮಾ ಮಸೀದಿ, ಬೈಕಂಪಾಡಿ ಅಡ್ಕ ಸಮುದಾಯ ಭವನ, ಬರಾಕ್ ಇಂಟರ್ ನ್ಯಾಷನಲ್ ಸ್ಕೂಲ್ ಅಡ್ಯಾರ್, ಜೋಕಿಮ್ಸ್ ಸ್ಕೂಲ್ ನೀರುಮಾರ್ಗ, ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಉಳಾಯಿಬೆಟ್ಟು, ಬಾಮಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗುರುಪುರ, ಬಾಜಿ ಮಂಜಿಲ್ ಜೆ.ಎಂ. ರೋಡ್ ಗಂಜೀಮಠ ಇಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಗೊಂಡಿದೆ.
ಕಾಟಿಪಳ್ಳ ಜಮಾತ್ ಅಧ್ಯಕ್ಷ ಅಹಮದ್ ಬಾವ, ಸೈಫುಲ್ಲಾ, ಬಶೀರ್ ಅಹಮದ್, ಅಯ್ಯೂಬ್, ಮುಸ್ಲಿಂ ಸಂಘ
ಟನೆಗಳ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳ, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಹ್ಯಾರೀಸ್ ಬೈಕಂಪಾಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.