ADVERTISEMENT

ಶ್ರದ್ಧಾ ಕೇಂದ್ರ ಸಂರಕ್ಷಣೆ, ಸದ್ಭಾವನೆ, ಸೇವೆಯ ಪ್ರತೀಕ: ಸಚಿವ ಶ್ರೀಪಾದ

ಗೆಜ್ಜೆಗಿರಿ ಕ್ಷೇತ್ರದಲ್ಲಿ ಯಾತ್ರಿ ನಿವಾಸಕ್ಕೆ ಶಿಲಾನ್ಯಾಸ: ಕೇಂದ್ರ ಸಚಿವ ಶ್ರೀಪಾದ ನಾಯ್ಕ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 4:16 IST
Last Updated 24 ನವೆಂಬರ್ 2025, 4:16 IST
ಗೆಜ್ಜೆಗಿರಿ ಕ್ಷೇತ್ರದಲ್ಲಿ ಯಾತ್ರಿ ನಿವಾಸಕ್ಕೆ ಬರೋಡಾದ ಉದ್ಯಮಿ ದಯಾನಂದ ಬೊಂಟ್ರ ಅವರು ಸೋಲೂರು ಮಠ ಆರ್ಯಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಅವರೊಂದಿಗೆ ಶಿಲಾನ್ಯಾಸ ನೆರವೇರಿಸಿದರು
ಗೆಜ್ಜೆಗಿರಿ ಕ್ಷೇತ್ರದಲ್ಲಿ ಯಾತ್ರಿ ನಿವಾಸಕ್ಕೆ ಬರೋಡಾದ ಉದ್ಯಮಿ ದಯಾನಂದ ಬೊಂಟ್ರ ಅವರು ಸೋಲೂರು ಮಠ ಆರ್ಯಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಅವರೊಂದಿಗೆ ಶಿಲಾನ್ಯಾಸ ನೆರವೇರಿಸಿದರು   

ಪುತ್ತೂರು: ಶ್ರದ್ಧಾ ಕೇಂದ್ರದ ಮೂಲಕ ಪ್ರತಿಯೊಬ್ಬರಿಗೂ ಶಾಂತಿ, ಸಮೃದ್ಧಿ ಸಿಗುತ್ತದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಪಾದಿಸಿದ ಸಮಾನತೆ, ಸಂಸ್ಕಾರದ ಪರಂಪರೆ ಮುಂದಿನ ಜನಾಂಗಕ್ಕೂ ದಾಟಬೇಕು. ಆ ಕಾರ್ಯಕ್ಕೆ ಶ್ರದ್ಧಾಕೇಂದ್ರಗಳು ಪೂರಕವಾಗಿರಬೇಕು ಎಂದು ಕೇಂದ್ರ ವಿದ್ಯುತ್ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವ ಶ್ರೀಪಾದ ನಾಯ್ಕ ‌ಹೇಳಿದರು.

ಬಡಗನ್ನೂರು ಗ್ರಾಮದ ಗೆಜ್ಜೆಗಿರಿಯಲ್ಲಿ ₹ 7 ಕೋಟಿ ವೆಚ್ಚದಲ್ಲಿ ತೌಳವ ಶೈಲಿಯಲ್ಲಿ ನಿರ್ಮಾಣಗೊಳ್ಳಲಿರುವ ಯಾತ್ರಿ ನಿವಾಸಕ್ಕೆ ಭಾನುವಾರ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೇವಾ ಮನೋಭಾವ ತುಳುನಾಡಿನ ಗೌರವ. ಇದು ನಮ್ಮ ಸಂಸ್ಕೃತಿ. ಯಾವುದೇ ಭೇದವಿಲ್ಲದೆ ನಡೆಯುವ ಅನ್ನದಾನ ಪವಿತ್ರ ಸೇವೆ. ಇದರಿಂದ ಶಾಂತಿ, ಸಮಾಧಾನ ಸಿಗುತ್ತದೆ. ಇಂಥ ಉತ್ತಮ ಕೆಲಸ ಗೆಜ್ಜೆಗಿರಿಯಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ADVERTISEMENT

ಆಶೀರ್ವಚನ ನೀಡಿದ ಸೋಲೂರು ಮಠ ಆರ್ಯಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ, ಸ್ವಾಭಿಮಾನದ ಪ್ರವೃತ್ತಿ ನಮ್ಮಲ್ಲಿ ಬೆಳೆಯಬೇಕು. ಏರಿದ ಏಣಿಯನ್ನು ಮರೆಯಬಾರದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಬಿಲ್ಲವ ಸಮುದಾಯದಲ್ಲಿ 24 ಪಂಗಡಗಳಿವೆ. ಕೇರಳದಲ್ಲಿ ಶೇ 100ರಷ್ಟು ಸಾಕ್ಷರತೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾತ್ರವೂ ಇದೆ. ಯುವ ಪೀಳಿಗೆ ಜೈಲಿಗೆ ಹೋಗದೆ ಉನ್ನತ ಶಿಕ್ಷಣ ಪಡೆದು ಉದ್ಯೋಗದತ್ತ ಗಮನಹರಿಸಬೇಕು ಎಂದರು.

ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಗೆಜ್ಜೆಗಿರಿಯಲ್ಲಿ ಆಯುರ್ವೇದ ಕೇಂದ್ರ ಸ್ಥಾಪಿಸುವ ಉದ್ದೇಶವನ್ನು ಸಮಿತಿಯವರು ಹೊಂದಿದ್ದು, ಈ ಸಂಬಂಧ ಪ್ರಯತ್ನ ನಡೆಸುವುದಾಗಿ ಹೇಳಿದರು.

ಯಾತ್ರಿ ನಿವಾಸಕ್ಕೆ ಶಿಲಾನ್ಯಾಸ ನೆರವೇರಿಸಿದ ಗುಜರಾತ್ ಬರೋಡಾದ ಉದ್ಯಮಿ ದಯಾನಂದ ಬೊಂಟ್ರ ಮಾತನಾಡಿ, ಗೆಜ್ಜೆಗಿರಿ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಸಮಾಜದ ಉನ್ನತಿಯಾಗಲಿ ಎಂದರು.

ದೇಯಿ ಬೈದೆತಿ, ಕೋಟಿ-ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ ಅಧ್ಯಕ್ಷತೆ ವಹಿಸಿದ್ದರು.

ಶಿವಗಿರಿ ಮಠದ ಜ್ಞಾನಾನಂದ ಸ್ವಾಮೀಜಿ, ಪ್ರಮುಖರಾದ ಹರೀಶ್ ಜಿ.ಅಮೀನ್, ಎನ್.ಟಿ.ಪೂಜಾರಿ, ಮಹೇಶ್ ಎನ್.ಅಂಚನ್, ನವೀನ್‌ಚಂದ್ರ ಸುವರ್ಣ, ಸೂರ್ಯಕಾಂತ ಜೆ.ಸುವರ್ಣ, ಸಂಜೀವ ಮಠಂದೂರು, ಪ್ರತಿಭಾ ಕುಳಾಯಿ, ಮಂಜುನಾಥ್ ಪೂಜಾರಿ ಮುದ್ರಾಡಿ, ಸತೀಶ್ ಕುಮಾರ್ ಕಡೆಂಜಿಗುತ್ತು, ಸತೀಶ್ ಕುಂಪಲ, ರಕ್ಷಿತ್ ಶಿವರಾಂ, ಲಕ್ಷ್ಮೀನರಸಯ್ಯ, ಹೇಮನಾಥ್ ಶೆಟ್ಟಿ ಕಾವು, ಲೋಕೇಶ್ ಕೋಟ್ಯಾನ್, ಸತೀಶ್ ರೈ ಕಟ್ಟಾವು, ಚಂದ್ರಶೇಖರ ಕುಮಾರ್, ಹರಿಶ್ಚಂದ್ರ ಅಮೀನ್, ಸದಾನಂದ ಪೆರ್ಲ, ಹರೀಶ್ ಪೂಜಾರಿ ಬರೋಡ, ಸುಜಿತಾ ಬಂಗೇರ, ಸರಿತಾ ಕೋಟ್ಯಾನ್, ಪಿ.ವಿ.ಮೋಹನ್, ಅವಿನಾಶ್, ಹರೀಶ್ ಪೂಜಾರಿ ಮಸ್ಕತ್, ‌ಪ್ರಮೋದ್ ಕುಮಾರ್. ಪದ್ಮರಾಜ್ ಆರ್.ಪೂಜಾರಿ, ಬಿ.ರಮಾನಾಥ ರೈ, ಶಕುಂತಳಾ ಶೆಟ್ಟಿ, ಪೀತಾಂಬರ ಹೆರಾಜೆ, ಜಯಂತ ನಡುಬೈಲು, ರವಿ ಪೂಜಾರಿ ಚಿಲಿಂಬಿ, ದೀಪಕ್ ಕೋಟ್ಯಾನ್, ಡಾ.ರಾಜಾರಾಮ್ ಕೆ.ಬಿ., ಮೋಹನ್‌ದಾಸ್‌ ಬಂಗೇರ, ಜಯವಿಕ್ರಮ್ ಕಲ್ಲಾಪು, ಡಾ.ಸಂತೋಷ್ ಕುಮಾರ್ ಬೈರಂಪಳ್ಳಿ, ಉಲ್ಲಾಸ್ ಕೋಟ್ಯಾನ್, ಹರೀಶ್ ಡಿ.ಸಾಲ್ಯಾನ್ ಬಜಗೋಳಿ ಭಾಗವಹಿಸಿದ್ದರು.

ದೇಯಿ ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಟ್ರಸ್ಟ್ ಗೌರವಾಧ್ಯಕ್ಷ ಡಾ.ರಾಜಶೇಖರ ಕೋಟ್ಯಾನ್ ಸ್ವಾಗತಿಸಿದರು. ಪ್ರಜ್ಞಾ ಓಡಿಲ್ನಾಲ, ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ಕ್ಷೇತ್ರದ ತಂತ್ರಿ ಶಿವಾನಂದ ಅವರ ಪೌರೋಹಿತ್ಯದಲ್ಲಿ ಯಾತ್ರಿ ನಿವಾಸದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಡಿ.3ರಂದು ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಕಾರ್ಯಕ್ರಮದ ಲೋಗೊ ಹಾಗೂ ‘ಪುಣ್ಯದ ಗೆಜ್ಜೆಗಿರಿ’ ಬಿಡುಗಡೆ ಮಾಡಲಾಯಿತು.

ಗೆಜ್ಜೆಗಿರಿ ಕ್ಷೇತ್ರದಲ್ಲಿ ಭಾನುವಾರ ನಡೆದ ಯಾತ್ರಿ ನಿವಾಸದ ಶಿಲಾನ್ಯಾಸ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಸೋಲೂರು ಮಠ ಆರ್ಯಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಶಿವಗಿರಿ ಮಠದ ಜ್ಞಾನಾನಂದ ಸ್ವಾಮೀಜಿ ಕೇಂದ್ರ ಸಚಿವ ಶ್ರೀಪಾದ ನಾಯ್ಕ ಬಿ.ಕೆ. ಹರಿಪ್ರಸಾದ್ ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.