ಪುತ್ತೂರು: ಮಾದಕ ವಸ್ತು ಸೇವನೆಯಿಂದ ಯುವಜನತೆ ದಾರಿ ತಪ್ಪುತ್ತಿದೆ. ಇದರ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ. ಮಾದಕ ಜಾಲದ ವಿರುದ್ಧ ರಾಜಕೀಯರಹಿತ ಹೋರಾಟ ಅಗತ್ಯವಿದೆ ಎಂದು ಮಹಾಲಿಂಗೇಶ್ವರ ದೇವಳ ವಠಾರದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಒತ್ತಾಯಿಸಿದರು.
ಮಾದಕ ವಸ್ತು ಸೇವನೆ ಮುಕ್ತ ಸ್ವಸ್ಥ ಸಮಾಜಕ್ಕಾಗಿ ಶನಿವಾರ ಇಲ್ಲಿ ಎಬಿವಿಪಿ ನಡೆಸಿದ ಸಹಿ ಸಂಗ್ರಹ ಅಭಿಯಾನದಲ್ಲಿ ಅವರು ಮಾತನಾಡಿದರು. ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಿ, ಮಾದಕ ದ್ರವ್ಯ ದಂಧೆಗೆ ಕಡಿವಾಣ ಹಾಕಬೇಕು ಎಂದರು.
ವಕೀಲ ಚಿನ್ಮಯ್ ಈಶ್ವಮಂಗಲ ಮಾತನಾಡಿ, ‘ಡ್ರಗ್ಸ್ ಜಾಲದಲ್ಲಿ ಶ್ರೀಮಂತರು, ರಾಜಕೀಯ ನಾಯಕರ ಮಕ್ಕಳು ಸೇರಿದ್ದಾರೆ. ಕಾಲೇಜು ಕ್ಯಾಂಪಸ್ಗಳಲ್ಲಿ ಡ್ರಗ್ಸ್ ಮಾರಾಟ ಅಧಿಕವಾಗುತ್ತಿದೆ. ಯುವ ಜನಾಂಗ ಇದಕ್ಕೆ ಬಲಿಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಡ್ರಗ್ಸ್ ಜಾಲದಲ್ಲಿ ತೊಡಗಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.
ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ ಅವರು ಸಹಿ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಎಬಿವಿಪಿ ವಿವೇಕಾನಂದ ಕಾಲೇಜು ಘಟಕದ ಅಧ್ಯಕ್ಷ ಮನೀಷ್ ಕುಲಾಲ್, ಕಾರ್ಯದರ್ಶಿ ಹರ್ಷಿತ್, ಮುಖಂಡರಾದ ನಿಶಾಂತ್, ನಿತೇಶ್, ಶಶಾಂತ್, ಪ್ರಾಣೇಶ್, ಮನೀಷ್, ಕಿಶನ್, ಅಶ್ವಿನ್, ದೀಕ್ಷಿತ್, ಜಗದೀಶ್, ಸಿಂಧು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.