ಪುತ್ತೂರು: ಕಾರು ಖರೀದಿಸಲು ಪರಿಚಯಸ್ಥನೊಂದಿಗೆ ತೆರಳಿ ಮುಂಗಡ ಹಣ ನೀಡಿದ್ದ ಮಹಿಳೆಯ ಸಹಿ ನಕಲು ಮಾಡಿ ಒಪ್ಪಿಗೆ ಪತ್ರವನ್ನು ಷೋರೂಮ್ಗೆ ನೀಡಿ ಕಾರು ಖರೀದಿಸಿ ವಂಚಿಸಿದ ಪ್ರಕರಣವೊಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸುಳ್ಯ ತಾಲ್ಲೂಕಿನ ಅಮರಮುನ್ನೂರು ಗ್ರಾಮದ ಚೊಕ್ಕಾಡಿ ನಿವಾಸಿ ಕಾವ್ಯ ಎಂ. ಎಂಬುವರು ವಂಚನೆಗೊಳಗಾದವರು.
ಕಾವ್ಯ ಎಂ. ಅವರು ಸಹೋದರ ಲಿಖಿತ್, ಸಹೋದರಿ ಪೂರ್ಣಿಮಾ ಮತ್ತು ಪರಿಚಯಸ್ಥನಾಗಿರುವ ಬೆಂಗಳೂರು ನಿವಾಸಿ ಅನಿಲ್ ಕುಮಾರ್ ಎಂಬುವರ ಜತೆಗೆ 2024ರ ಫೆ.29ರಂದು ಪುತ್ತೂರಿನ ಕಾರ್ ಷೋರೂಮ್ಗೆ ತೆರಳಿ ಕಾರು ಬುಕ್ ಮಾಡಿ ಮುಂಗಡ ಹಣವಾಗಿ ₹ 1.50 ಲಕ್ಷವನ್ನು ಷೋರೂಮ್ನ ಸೇಲ್ಸ್ ಎಕ್ಸಿಕ್ಯೂಟಿವ್ ಪೃಥ್ವಿ ಅವರಿಗೆ ನೀಡಿದ್ದರು. ಕಾರಿನ ಮುಂಗಡ ಹಣದ ಪೈಕಿ ಬಾಕಿ ಉಳಿದಿದ್ದ ₹ 40 ಸಾವಿರವನ್ನು 2024ರ ಮಾರ್ಚ್ 5ರಂದು ಯುಪಿಐ ಮೂಲಕ ಪಾವತಿಸಿದ್ದರು. ನಂತರ ಕಾವ್ಯ ಅವರಿಗೆ ಕಾರು ಖರೀದಿಸಲು ಅನಾನುಕೂಲವಾದ ಕಾರಣ ಕಾರು ಖರೀದಿಸಲು ಸ್ವಲ್ಪ ಕಾಲಾವಕಾಶ ಕೋರಿದ್ದರು. ಅಲ್ಲದೆ, ಮುಂಗಡ ಹಣ ನಿಮ್ಮಲ್ಲೇ ಇರಲಿ ಎಂದು ಪೃಥ್ವಿ ಅವರಿಗೆ ತಿಳಿಸಿದ್ದರು.
ಅಗಸ್ಟ್ನಲ್ಲಿ ಪೃಥ್ವಿ ಅವರಿಗೆ ಕರೆ ಮಾಡಿ ಕಾರು ಖರೀದಿಸುವುದಾಗಿ ತಿಳಿಸಿದಾಗ, ಅನಿಲ್ ಎಂಬುವರು ನಿಮ್ಮ ಸಹಿ ಇರುವ ಒಪ್ಪಿಗೆ ಪತ್ರವನ್ನು ಕೊಟ್ಟು ಕಾರನ್ನು ಖರೀದಿಸಿದ್ದಾರೆ ಎಂದು ತಿಳಿಸಿದ್ದರು. ಈ ಕುರಿತು ಷೋರೂಮ್ನಲ್ಲಿ ವಿಚಾರಿಸಿದಾಗ, ಕಾವ್ಯ ಅವರು ನೀಡಿದ್ದ ಮುಂಗಡ ಹಣವನ್ನು ಹೊಂದಾಣಿಕೆ ಮಾಡಿ ಅನಿಲ್ ಕಾರು ಖರೀದಿಸಿ ಹೇಮ ಎಂಬುವರಿಗೆ ನೀಡಿರುವ ಮಾಹಿತಿ ಲಭಿಸಿತ್ತು.
ಈ ಕುರಿತು ಕಾವ್ಯ ಅವರು, ನಕಲಿ ಸಹಿ ಮಾಡಿ ಒಪ್ಪಿಗೆ ಪತ್ರವನ್ನು ಷೋರೂಮ್ಗೆ ನೀಡಿ ಕಾರು ಖರೀದಿಸಿದ್ದ ಅನಿಲ್ ಕುಮಾರ್, ಕಾರು ಖರೀದಿ ಮಾಡಿದ್ದ ಬಗ್ಗೆ ಮಾಹಿತಿ ನೀಡದ ಷೋರೂಮ್ ಮ್ಯಾನೇಜರ್, ಅಕೌಂಟೆಂಟ್, ಸೇಲ್ಸ್ ಎಕ್ಸಿಕ್ಯೂಟಿವ್ ಪೃಥ್ವಿ ಹಾಗು ಕಾರು ಖರೀದಿ ಮಾಡಿದ್ದ ಹೇಮಾ ಎಂಬುವರ ವಿರುದ್ಧ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.