ADVERTISEMENT

ಹೃದಯಾಘಾತದಿಂದ ಯೋಧ ನಿಧನ:ಸರ್ಕಾರಿ ಗೌರವದೊಂದಿಗೆ ಅಂತಿಮ ವಿದಾಯ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 16:12 IST
Last Updated 28 ಮಾರ್ಚ್ 2023, 16:12 IST
ಲಿಜೇಶ್ ಕುರಿಯನ್
ಲಿಜೇಶ್ ಕುರಿಯನ್   

ಉಪ್ಪಿನಂಗಡಿ: ಹೃದಯಾಘಾತದಿಂದ ನಿಧನರಾದ ಕಡಬ ಮೂಲದ ಯೋಧ ಲಿಜೇಶ್ ಕುರಿಯನ್ (30) ಅವರಿಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ಗೌರವ ಸಲ್ಲಿಸಿ, ಫಾದರ್ ಜೋಸ್ ಆಯಂಕುಡಿ ಅವರ ನೇತೃತ್ವದಲ್ಲಿ ಅಂತಿಮ ಕಾರ್ಯ ನೆರವೇರಿಸಲಾಯಿತು.

ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮಾಜಿ ಸೈನಿಕ ಜೋನಿ ಟಿ.ಕೆ. ಅವರ ಪುತ್ರ ಲಿಜೇಶ್ ತಮಿಳುನಾಡಿನ ಮದ್ರಾಸ್ 20 ರಿಜಿಮೆಂಮೆಂಟ್‌ನ ಕೊಲ್ಕತ್ತಾ ಘಟಕದಲ್ಲಿ ಯೋಧರಾಗಿದ್ದರು. ಭಾನುವಾರ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅವರಿಗೆ ತಂದೆ ಜೋನಿ, ತಾಯಿ, ಪತ್ನಿ ಜೋಮಿತಾ, ಒಂದು ವರ್ಷದ ಮಗು ಜೋಝಿಲ್ ಜಾನ್‌ ಇದ್ದಾರೆ.

ಮೃತದೇಹವನ್ನು ಮಂಗಳವಾರ ಬೆಳಿಗ್ಗೆ ತಮಿಳುನಾಡಿನಿಂದ ಆಂಬುಲೆನ್ಸ್ ಮೂಲಕ ಕಡಬದ ರೆಂಜಿಲಾಡಿಯ ತರಪ್ಪೇಳ್‌ನ ಮನೆಗೆ ತಂದು ಬಳಿಕ ಕುಟ್ರುಪಾಡಿ ಸಂತ ಮೇರಿಸ್ ಕಥೊಲಿಕ್ ಫೋರೋನಾ ಚರ್ಚ್‌ನಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಯಿತು. ನೂರಾರು ಜನರು ಅಂತಿಮ ದರ್ಶನ ಪಡೆದು, ಗೌರವ ಸಲ್ಲಿಸಿದರು.

ADVERTISEMENT

19 ಕರ್ನಾಟಕ ಬೆಟಾಲಿಯನ್‌ನ ಎನ್‌ಸಿಸಿ, (ಸಿಎಚ್ಎಂ) ಚೇತನ್ ಗೌಡ, ಹವಾಲ್ದಾರ್ ಸಮರ್ದೀಪ್, ದಿಲ್ದಾರ್ ಸಿಂಗ್, ಹವಾಲ್ದಾರ್ ವಿಪಿನ್ ಕುಮಾರ್ ಮೊದಲಾದವರ ನೇತೃತ್ವದಲ್ಲಿ ಪಾರ್ಥಿವ ಶರೀರವನ್ನು ಸೇನಾ ಗೌರವಗಳೊಂದಿಗೆ ಚರ್ಚ್‌ಗೆ ತಂದು ಗೌರವ ಸಲ್ಲಿಸಲಾಯಿತು.

ಕಡಬ ತಾಲ್ಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಜೆಪಿಎಂ ಚೆರಿಯನ್, ಪದಾಧಿಕಾರಿ ಟಿ.ಜಿ ಮ್ಯಾಥ್ಯೂ, ಮಹಿಳಾ ವೀರನಾರಿ ಘಟಕದ ಅಧ್ಯಕ್ಷೆ ಗೀತಾ, ಘಟಕದ ಪದಾಧಿಕಾರಿಗಳು ರಾಷ್ಟ್ರಧ್ವಜ ಹಾಕುವ ಮೂಲಕ ಗೌರವ ಸಲ್ಲಿಸಿದರು. ತಹಶೀಲ್ದಾರ್ ರಮೇಶ್ ಬಾಬು, ಕಡಬ ಠಾಣೆ ಪಿಎಸ್ಐ ಶಶಿಧರ್ ಗೌರವ ಸಲ್ಲಿಸಿದರು.

ಲಿಜೇಶ್ 12 ವರ್ಷಗಳಿಂದ ಯೋಧರಾಗಿದ್ದು, ತಂದೆ, ತಾಯಿ, ಪತ್ನಿ ಮಗುವಿನೊಂದಿಗೆ ಕೊಯಂಬತ್ತೂರಿನಲ್ಲಿ ವಾಸ್ತವ್ಯವಿದ್ದರು. ಲಿಜೇಶ್ ಅವರು ಇದೇ ತಿಂಗಳ 30ರಂದು 30ನೇ ವರ್ಷದ ಜನ್ಮದಿನ ಆಚರಿಸುವವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.