ADVERTISEMENT

ರಾಮ ನಾಮದಿಂದ ವ್ಯಕ್ತಿಗೆ ಶಕ್ತಿ ಪ್ರಾಪ್ತಿ: ರಘುನಾಥ ಸೋಮಯಾಜಿ

ಕದ್ರಿ ಮೈದಾನದಲ್ಲಿ ಮೂರು ದಿನಗಳ ಶ್ರೀರಾಮೋತ್ಸವ ಆರಂಭ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 4:17 IST
Last Updated 30 ಮಾರ್ಚ್ 2023, 4:17 IST
ಮಂಗಳೂರಿನ ಕದ್ರಿ ಮೈದಾನದಲ್ಲಿ ಆರಂಭವಾಗಿರುವ ಶ್ರೀರಾಮೋತ್ಸವದಲ್ಲಿ ಗೋವುಗಳಿಗೆ ಗೋಗ್ರಾಸ ನೀಡಿ ಪೂಜಿಸಲಾಯಿತು
ಮಂಗಳೂರಿನ ಕದ್ರಿ ಮೈದಾನದಲ್ಲಿ ಆರಂಭವಾಗಿರುವ ಶ್ರೀರಾಮೋತ್ಸವದಲ್ಲಿ ಗೋವುಗಳಿಗೆ ಗೋಗ್ರಾಸ ನೀಡಿ ಪೂಜಿಸಲಾಯಿತು   

ಮಂಗಳೂರು: ವಿಶ್ವಹಿಂದೂ ಪರಿಷತ್ ಮತ್ತು ಶ್ರೀ ರಾಮೋತ್ಸವ ಸಮಿತಿ ಜಂಟಿಯಾಗಿ ಆಯೋಜಿಸಿರುವ ಮೂರು ದಿನಗಳ ‘ಶ್ರೀರಾಮೋತ್ಸವ‘ವು ನಗರದ ಕದ್ರಿ ಮೈದಾನದಲ್ಲಿ ಬುಧವಾರದಿಂದ ಆರಂಭವಾಗಿದೆ.

ವಿಶ್ವ ಹಿಂದೂ ಪರಿಷದ್ ಕಾರ್ಯಾಲಯದಿಂದ ಸೀತಾರಾಮ ದೇವರ ವಿಗ್ರಹವನ್ನು ಬುಧವಾರ ಬೆಳಿಗ್ಗೆ ಕದ್ರಿ ಮೈದಾನಕ್ಕೆ ತಂದು ಅಲ್ಲಿ ನಿರ್ಮಿಸಿರುವ ಅಯೋಧ್ಯೆ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಉದ್ಯಮಿ ರಘುನಾಥ ಸೋಮಯಾಜಿ ಅವರು ಧ್ವಜಾರೋಹಣ ಮಾಡುವ ಮೂಲಕ ರಾಮೋತ್ಸವಕ್ಕೆ ಚಾಲನೆ ನೀಡಿದರು.

ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಕರಿಂಜೆ ಲಕ್ಷ್ಮಿಸತ್ಯನಾರಾಯಣ ವೀರಾಂಜನೇಯ ದೇವಸ್ಥಾನದ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ‘ಹಿಂದೂ ಧರ್ಮದ ತಳಹದಿ ಗಟ್ಟಿಯಾಗಿರುವುದರಿಂದ ಈ ದೇಶ ಉಳಿದಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ವಿಶ್ವ ಹಿಂದೂ ಪರಿಷತ್ ಈ ದೇಶದ ಅಂತಃಸತ್ವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇವೆರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವು ಗಟ್ಟಿಯಾಗಿ ಇರುವ ತನಕ ಈ ದೇಶವನ್ನು ಅಲ್ಲಾಡಿಸಲು ಸಾಧ್ಯವಿಲ್ಲ’ ಎಂದರು.

ADVERTISEMENT

ಒಂದು ಕಾಲದಲ್ಲಿ ಜೈ ಶ್ರೀರಾಮ ಎಂದು ಹೇಳಲೂ ಹೆದರುತ್ತಿದ್ದೆವು. ರಾಮೋತ್ಸವ ಆರಂಭವಾದ ಮೇಲೆ ಎಲ್ಲರೂ ಸಂಭ್ರಮದಿಂದ ಮುಕ್ತವಾಗಿ ಭಾಗವಹಿಸುತ್ತಿದ್ದಾರೆ. ಶ್ರೀರಾಮ ವ್ಯಕ್ತಿಯೊಳಗೆ ಪ್ರವೇಶಿಸಿದರೆ, ಆ ವ್ಯಕ್ತಿಯೊಳಗೆ ಶಕ್ತಿ ಪ್ರಾಪ್ತವಾಗುತ್ತದೆ. ರಾಮನ ಆದರ್ಶವನ್ನು ಯುವಜನರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರು, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಉದ್ಯಮಿಗಳಾದ ಡಿ.ವಾಸುದೇವ ಕಾಮತ್, ಅಶೋಕ್ ಕುಮಾರ್, ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ, ಪ್ರಮುಖರಾದ ವಿಕ್ರಮ್ ರಾಜ್, ರಣದೀಪ್ ಕಾಂಚನ್, ಅನಿಲ್ ದಾಸ್, ಸುಧೀರ್ ಕದ್ರಿ, ಶ್ರೀನಿವಾಸ್ ಕಿಣಿ, ಅಶೋಕ್ ಕಾಮತ್, ರಾಮೋತ್ಸವ ಸಮಿತಿ ಸಂಚಾಲಕ ನವೀನ್ ಮೂಡುಶೆಡ್ಡೆ ಇದ್ದರು.

ವಿ ಅಸೈಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀರಾಮೋತ್ಸವ ಸಮಿತಿ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.