ADVERTISEMENT

‘ಸರ್ಕಾರಗಳಿಂದ ಶಿಕ್ಷಣ ಕ್ಷೇತ್ರದ ನಿರ್ಲಕ್ಷ್ಯ’

ಅಕ್ಷರ ದಾಸೋಹ ನೌಕರರ ಸಮ್ಮೇಳನದಲ್ಲಿ ಮಾಲಿನಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 6:22 IST
Last Updated 4 ಆಗಸ್ಟ್ 2021, 6:22 IST
ಮಂಗಳೂರಿನ ಬೋಳಾರದ ಎಸ್‌ಕೆ ಟೈಲ್‌ ಯೂನಿಯನ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಸಮ್ಮೇಳನದಲ್ಲಿ ಸಿಐಟಿಯುನ ಜಿಲ್ಲಾ ಘಟಕದ ಅಧ್ಯಕ್ಷ ವಸಂತ ಆಚಾರಿ ಮಾತನಾಡಿದರು.
ಮಂಗಳೂರಿನ ಬೋಳಾರದ ಎಸ್‌ಕೆ ಟೈಲ್‌ ಯೂನಿಯನ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಸಮ್ಮೇಳನದಲ್ಲಿ ಸಿಐಟಿಯುನ ಜಿಲ್ಲಾ ಘಟಕದ ಅಧ್ಯಕ್ಷ ವಸಂತ ಆಚಾರಿ ಮಾತನಾಡಿದರು.   

ಮಂಗಳೂರು: ಸಿಐಟಿಯು ಅಧೀನದ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ ಜಿಲ್ಲಾ ಸಮ್ಮೇಳನ ಸೋಮವಾರ ನಗರದಲ್ಲಿ ನಡೆಯಿತು.

ಉದ್ಘಾಟಿಸಿ ಮಾತನಾಡಿದ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿಲ್ಲ. ಖಾಸಗೀಕರಣವೇ ಸರ್ಕಾರದ ವೇದ ವಾಕ್ಯವಾಗಿದೆ. ಸರ್ಕಾರ ಹೇರಿರುವ ಲಾಕ್‌ಡೌನ್ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಬಿಸಿಯೂಟ ತಯಾರಿಸಿ ಬಡಿಸುವ ಕಾರ್ಮಿಕರಿಗೆ ಬಾಕಿ ವೇತನ ನೀಡದೆ ಸತಾಯಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಪರಿಣಾಮಕಾರಿ ಹೋರಾಟದಿಂದಾಗಿ ಹತ್ತು ತಿಂಗಳ ವೇತನ ಪಡೆಯಲು ಸಾಧ್ಯವಾಗಿದೆ. ಬಾಕಿ ವೇತನ ಕಾರ್ಮಿಕರಿಗೆ ನೀಡುವ ಬದಲು, ಮಕ್ಕಳ ಖಾತೆಗೆ ನೇರ ನಗದು ವರ್ಗಾವಣೆ ಮಾಡಲು ಹೊರಟಿದೆ. ಇದು ಕಾರ್ಮಿಕರನ್ನು ಬೀದಿಪಾಲು ಮಾಡುವ ಹುನ್ನಾರವಾಗಿದೆ. ಬಿಸಿಯೂಟಕ್ಕೆ ಸಂಬಂಧಿಸಿ ಹಣವನ್ನು ಮಕ್ಕಳ ಖಾತೆಗೆ ನೇರ ನಗದು ಮಾಡಬಾರದು. ಕೂಡಲೇ ಬಿಸಿಯೂಟ ನೌಕರರ ಬಾಕಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಿಐಟಿಯು ಜಿಲ್ಲಾ ಮುಖಂಡರಾದ ಜೆ.ಬಾಲಕೃಷ್ಣ ಶೆಟ್ಟಿ, ವಸಂತ ಆಚಾರಿ ಮಾತನಾಡಿದರು. ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಜಯಂತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭಾರತಿ ಬೋಳಾರ್ ವೇದಿಕೆಯಲ್ಲಿದ್ದರು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗಿರಿಜಾ ಮೂಡುಬಿದಿರೆ ವರದಿ ವಾಚಿಸಿದರು. ಖಜಾಂಚಿ ಭವ್ಯಾ ಲೆಕ್ಕಪತ್ರ ಮಂಡಿಸಿದರು. ಸಂಘದ ನೂತನ ಪದಾಧಿಕಾರಿಗಳಾದ ಪದ್ಮಾವತಿ ಶೆಟ್ಟಿ (ಗೌರವಾಧ್ಯಕ್ಷೆ), ಭವ್ಯಾ (ಅಧ್ಯಕ್ಷೆ), ಗಿರಿಜಾ ಮೂಡುಬಿದಿರೆ (ಪ್ರಧಾನ ಕಾರ್ಯದರ್ಶಿ), ರತ್ನಮಾಲಾ (ಖಜಾಂಚಿ) ಹಾಗೂ 15 ಮಂದಿ ಪದಾಧಿಕಾರಿಗಳು ಮತ್ತು 15 ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.