ADVERTISEMENT

ಕೋಮು ದ್ವೇಷ ಹರಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಬಿ.ಕೆ.ಹರಿಪ್ರಸಾದ್

ಮುಸ್ಲಿಮರ ಅಳಲು ಆಲಿಸಿದ ಬಿ.ಕೆ.ಹರಿಪ್ರಸಾದ್ ಭರವಸೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 15:21 IST
Last Updated 5 ಜೂನ್ 2025, 15:21 IST
ಬಿ.ಕೆ ಹರಿಪ್ರಸಾದ್ ಅವರು ಬಂಟ್ವಾಳ ತಾಲ್ಲೂಕಿನ ಕೊಳತ್ತಮಜಲಿನ ದಿ.ಅಬ್ದುಲ್ ರಹಿಮಾನ್ ಮನೆಗೆ ಗುರುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು
ಬಿ.ಕೆ ಹರಿಪ್ರಸಾದ್ ಅವರು ಬಂಟ್ವಾಳ ತಾಲ್ಲೂಕಿನ ಕೊಳತ್ತಮಜಲಿನ ದಿ.ಅಬ್ದುಲ್ ರಹಿಮಾನ್ ಮನೆಗೆ ಗುರುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಚೆಗೆ ನಡೆದ ಧರ್ಮಾಧಾರಿತ ಹತ್ಯೆಗಳು ಹಾಗೂ ದ್ವೇಷ ಭಾಷಣಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಕೋಮುದ್ವೇಷ ಸಾರುವ ಸಂದೇಶಗಳ ಬಗ್ಗೆ ಮುಸ್ಲಿಂ ಮುಖಂಡರು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್‌ ಜೊತೆ ತಮ್ಮ ಭಾವನೆ ಹಂಚಿಕೊಂಡರು.

ಉಲೆಮ ಕೋ ಆರ್ಡಿನೇಷನ್ ಕರ್ನಾಟಕದ ಧರ್ಮಗುರುಗಳು ಹಾಗೂ ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಇಲ್ಲಿ ಗುರುವಾರ ಸಭೆ ನಡೆಸಿದ ಹರಿಪ್ರಸಾದ್‌, ಸಮುದಾಯದ ಸಂಕಟಗಳಿಗೆ ಕಿವಿಯಾದರು. ಅಬ್ದುಲ್‌ ರೆಹಮಾನ್‌ನನ್ನು ಗೆಳೆಯರೇ ಕರೆಸಿಕೊಂಡು ಕೊಂದ, ಗುಂಪು ಹಲ್ಲೆ ನಡೆಸಿ ಅಶ್ರಫ್ ಹತ್ಯೆ ನಡೆಸಿದ ಮತ್ತು ತದನಂತರದ ಬೆಳವಣಿಗೆಗಳನ್ನು ಮುಖಂಡರು ವಿವರಿಸಿದರು. 

‘ಕೆಲವರು ನಮ್ಮ ಸಮುದಾಯವನ್ನು ಉದ್ದೇಶಿಸಿ ದಾದಾಗಿರಿ ನಡೆಸುತ್ತಿದ್ದಾರೆ. ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿರುವ ಕುಟುಂಬಗಳೂ ಆತಂಕದಿಂದ ಬದುಕಬೇಕಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ತಲೆಗೂ ಕೋಮುವಾದ ತುರುಕಲಾಗುತ್ತಿದೆ. ಸೌಹಾರ್ದ ಸಾರುವ ಪಠ್ಯಗಳನ್ನು ಅಳವಡಿಸುವ ಅಗತ್ಯವಿದೆ. ಕೋಮು ದ್ವೇಷ ಹಬ್ಬಿಸುವುದರ ಹಿಂದಿರುವ ಡ್ರಗ್‌ ಮಾಫಿಯಾವನ್ನೂ ಮಟ್ಟಹಾಕಬೇಕು’ ಎಂದು ಆಗ್ರಹಿಸಿದರು.

ADVERTISEMENT

ಬಿ.ಕೆ.ಹರಿಪ್ರಸಾದ್‌, ‘ರಾಜ್ಯದ ಬಹುತೇಕ ಕಡೆ ಕೋಮು ಹಿಂಸೆಗಳಿಗೆ ಕಡಿವಾಣ ಹಾಕುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಜಿಲ್ಲೆಯಲ್ಲಿ ಈಚೆಗೆ ನಡೆದ ಬೆಳವಣಿಗೆಗಳನ್ನು ಸರ್ಕಾರ ಗಂಭೀರವಾಗಿ ‍ಪರಿಗಣಿಸಿದೆ. ಕೋಮು ದ್ವೇಷ ಹರಡುವವರ ವಿರುದ್ಧ ಕಟ್ಟುನಿಟ್ಟನ  ಕ್ರಮ ಕೈಗೊಳ್ಳಲಿದೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಯಲ್ಲಿ ಶೇ  99 ರಷ್ಟು ಮಂದಿ ಅನ್ಯೋನ್ಯವಾಗಿದ್ದಾರೆ. ಕೋಮು ದ್ವೇಷ ಹರಡುವ ಸೂತ್ರಧಾರರು ಯಾರು ಎಂದು ಎಲ್ಲರಿಗೂ ಗೊತ್ತಿದೆ. ಈ ಅದೃಶ್ಯ ಶಕ್ತಿಗಳೇ ಧರ್ಮಾಧಾರಿತ ಹತ್ಯೆಗಳ ಮೂಲಕ ಸಮಾಜದಲ್ಲಿ ಕಂದಕ ಸೃಷ್ಟಿಸುತ್ತಿವೆ. ಜಿಲ್ಲೆಯ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಮುಖಂಡ ರಾಹುಲ್ ಗಾಂಧಿಯವರ ಗಮನಕ್ಕೆ ತಂದಿದ್ದೇನೆ. ಸಮುದಾಯದ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ. ಇಲ್ಲಿನ ಶಾಂತಿ, ಸೌಹಾರ್ದ ಕಾಪಾಡಲು ವಿವಿಧ ಧರ್ಮಗಳ ಮುಖಂಡರನ್ನು ಸೇರಿಸಿ ಸಭೆ ನಡೆಸುತ್ತೇವೆ’ ಎಂದರು. 

ಉಲಮಾ ಕೋ ಆರ್ಡಿನೇಷನ್ ಸಮಿತಿಯ ಸಯ್ಯದ್ ಇಸ್ಮಾಯಿಲ್ ತಂಙಳ್ ಮದನಿ, ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಆಶ್ರಫ್ ಸಾದಿ ಮಲ್ಲೂರು, ಕೆ.ಎಂ.ಉಸ್ಮಾನುಲ್ ಫೈಝಿ ತೋಡಾರ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮುಖಂಡ ಅಬ್ದುಲ್ ರವೂಫ್, ಶಾಹುಲ್ ಹಮೀದ್‌, ಎಂ.ಎಸ್.ಮಹಮ್ಮದ್ ಮತ್ತಿತರರು ಭಾಗವಹಿಸಿದ್ದರು.

ರಾಜ್ಯ ವಕ್ಫ್‌ ಪರಿಷತ್ತಿನ ಉಪಾಧ್ಯಕ್ಷ ಎನ್‌.ಕೆ.ಮೊಹಮ್ಮದ್‌ ಶಾಫಿ ಸಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಎಸ್ ಎಂ ಅಬ್ದುಲ್ ರಶೀದ್ ಝೈನಿ ಮತ್ತು ಅನೀಸ್ ಕೌಸರಿ ಅವರು ಸಮುದಾಯದ ಬೇಡಿಕೆಗಳನ್ನು ಮಂಡಿಸಿದರು. 

‘ಗೋಲಿಬಾರ್ ಪ್ರಕರಣ– ಸಿಗಲಿ ನ್ಯಾಯ’

ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ ) ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ 2019ರ ಡಿಸೆಂಬರ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನಡೆದ ಗೋಲಿಬಾರ್ ಪ್ರಕರಣದ ಸಂಬಂಧ ಕೆಲ ಅಮಾಯಕ ಮುಸ್ಲಿಂ ಯುವಕರು ನ್ಯಾಯಾಲಯಕ್ಕೆ ಪೊಲೀಸ್ ಠಾಣೆಗಳಿಗೆ ಈಗಲೂ ಅಲೆದಾಡುತ್ತಿದ್ದಾರೆ. ಅವರಿಗೆ ತ್ವರಿತವಾಗಿ ನ್ಯಾಯ ಒದಗಿಸಬೇಕು ಎಂದು ಮುಸ್ಲಿಂ ಮುಖಂಡರು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.