ಪುತ್ತೂರು: ರಾಜಕೀಯದವರ ಕೈಗೆ ನಮ್ಮ ಮಕ್ಕಳು ಸಿಗದಂತೆ ನೋಡಿಕೊಳ್ಳಿ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿ ನಿಗಮದ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಹೇಳಿದರು.
ತಾಲ್ಲೂಕಿನ ಕುಂಬ್ರದಲ್ಲಿ ಸುಳ್ಯದ ಕಾಮಧೇನು ವಿವಿಧೋದ್ದೇಶ ಚಾರಿಟಬಲ್ ಟ್ರಸ್ಟ್, ಮುಂಡೂರಿನ `ಸ್ಪರ್ಶ' ಸಹಾಯವಾಣಿ ಹಾಗೂ `ಬಾಂತಲಪ್ಪು' ಸೇವಾ ಸಮಿತಿಯ ಅಶ್ರಯದಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಕ್ಕಳು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಹೆತ್ತವರು ಬಯಸುತ್ತಾರೆ. ಆದರೆ ರಾಜಕೀಯದವರು ಮಕ್ಕಳನ್ನು ದುರ್ಬಳಕೆ ಮಾಡಿಕೊಂಡು, ಅವರ ಜೀವನ ಹಾಳು ಮಾಡುತ್ತಾರೆ’ಎಂದುದೂರಿದರು.
‘ಸರ್ಕಾರ ಎಲ್ಲ ಕ್ಷೇತ್ರವನ್ನೂ ಖಾಸಗೀಕರಣ ಮಾಡುತ್ತಿದ್ದು, ಯುವಜನತೆಗೆ ಉದ್ಯೋಗ ಸಿಗುವುದೂ ಕಷ್ಟಕರವಾಗಿದೆ. ಸರ್ಕಾರಿ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಯುವಜನತೆಯ ಮೇಲಿದೆ’ ಎಂದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಮಾತನಾಡಿ, ಮಕ್ಕಳು ವಿದ್ಯೆ ಕಡೆಗೆ ಹೆಚ್ಚಿನ ಒಲವು ತೋರುವಂತೆ ಪೋಷಕರು ಆಸಕ್ತಿ ವಹಿಸಬೇಕು ಎಂದರು.
ಒಳಮೊಗ್ರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಪಳ್ಳತ್ತಾರು, ಮುಖಂಡರಾದ ರಾಧಾಕೃಷ್ಣ ರೈ ಬೂಡಿಯಾರು, ಶಿವನಾಥ ರೈ ಮೇಗಿನಗುತ್ತು, ಮಾಧವ ಗೌಡ ಬೆಳ್ಳಾರೆ, ವಕೀಲ ಕುಂಬ್ರ ದುರ್ಗಾಪ್ರಸಾದ್ ರೈ, ಸುಂದರಿ ಪರ್ಪುಂಜ ಭಾಗ್ಯೇಶ್ ರೈ, ಜಯಂತ ನಡುಬೈಲು, ಎಸ್.ಎಂ.ಬಶೀರ್ ಶೇಖಮಲೆ, ಅಶೋಕ ಪೂಜಾರಿ ಬೊಳ್ಳಾಡಿ, ವಿನೋದ್ ಶೆಟ್ಟಿ ಮುಡಾಲ, ಚಿತ್ರಾ.ಬಿ ಸಿ, ಶಾರದಾ, ಅಶ್ರಫ್ ಉಜಿರೋಡಿ, ಶೀನಪ್ಪ ನಾಯ್ಕ್, ಹಿರಿಯ ಕೃಷಿಕ ನಾರಾಯಣ ರೈ ಬಾರಿಕೆ, ಮಹಮ್ಮದ್ ಬಡಗನ್ನೂರು, ರಕ್ಷಿತ್ ರೈ ಮುಗೇರು, ಶಶಿಕಿರಣ್ ರೈ ನೂಜಿಬೈಲು, ಬಾಲಕೃಷ್ಣ ಪೊರ್ದಾಳ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.