ಮಂಗಳೂರು: ನಗರ ಹೊರವಲಯದ ದೇರಳಕಟ್ಟೆಯ ಜುಲೇಖಾ ಯೆನೆಪೋಯ ಕ್ಯಾನ್ಸರ್ ಕೇಂದ್ರದಲ್ಲಿ ರೋಗಿಯೊಬ್ಬರ ಮೂಳೆ ಮಜ್ಜೆಯ ಕಸಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ.
ಹೆಮಟಾಲಜಿಸ್ಟ್ ಹಾಗೂ ರಕ್ತ ಕ್ಯಾನ್ಸರ್ ತಜ್ಞ ಡಾ.ರಾಜೇಶ್ ಕೃಷ್ಣ ಅವರ ನೇತೃತ್ವದಲ್ಲಿ ಚಿಕಿತ್ಸೆ ನಡೆದಿದ್ದು ಮಂಗಳೂರಿನಲ್ಲಿ ಈ ಶಸ್ತ್ರಚಿಕಿತ್ಸೆ ಆಗಿರುವುದು ಇದೇ ಮೊದಲು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಬಂಟ್ವಾಳ ತಾಲ್ಲೂಕಿನ 40 ವರ್ಷದ ವ್ಯಕ್ತಿಯೊಬ್ಬರು ತೀವ್ರವಾದ ವೈಲಾಯ್ಡ್ ಲುಕೇಮಿಯದಿಂದ ಬಳಲುತ್ತಿದ್ದರು. ಅವರ ಅಸ್ತಿಮಜ್ಜೆಗೆ ಹೊಂದಾಣಿಕೆಯಾಗುವ ದಾನಿ ಸಿಗದ ಕಾರಣ ಸಮಸ್ಯೆ ಬಿಗಡಾಯಿಸಿತ್ತು. ಆದರೆ ದೃತಿಗೆಡದ ವೈದ್ಯರ ತಂಡ ಅರ್ಧ ಹೊಂದಾಣಿಕೆಯಾಗುವ ದಾನಿಯ (ಹ್ಯಾಪ್ಲಾಯ್ಡೆಂಟಿಕಲ್) ಮಜ್ಜೆಯನ್ನು ಕಸಿ ಮಾಡಲು ಮುಂದಾಗಿದ್ದರು. ದಾನಿಯು ರೋಗಿಯ ಸಹೋದರನೇ ಆಗಿದ್ದರೂ ರಕ್ತದ ಗುಂಪು ಬೇರೆಯಾಗಿದ್ದ ಕಾರಣ ಸವಾಲು ಎದುರಾಗಿತ್ತು. ಆದರೂ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಲಂಡನ್ನಲ್ಲಿ ಹೆಮಟಾಲಜಿ ತರಬೇತಿ ಪಡೆದಿರುವ ರಾಜೇಶ್ ಕೃಷ್ಣನ್ 15 ವರ್ಷ ಯುನೈಟೆಡ್ ಕಿಂಗ್ಡಂನ ವಿವಿಧ ಕಡೆಗಳಲ್ಲಿ ಹಲವು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮಂಗಳೂರಿನಲ್ಲಿ ಲಿಂಫೋಮಾ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದು ಮಗುವಿನ ಅಸ್ತಿಮಜ್ಜೆ ಕಸಿ ಮಾಡಿ ಯಶಸ್ವಿಯಾಗಿದ್ದಾರೆ ಎಂದು ಪ್ರಕಟಣೆ ವಿವರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.