ADVERTISEMENT

ಮಾಜಿ ಕೇಂದ್ರ ಸಚಿವ ಆಸ್ಕರ್‌ ಫರ್ನಾಂಡಿಸ್‌ಗೆ ಯಶಸ್ವಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 8:32 IST
Last Updated 27 ಜುಲೈ 2021, 8:32 IST
ಆಸ್ಕರ್ ಫರ್ನಾಂಡಿಸ್​ ಅವರ ಸಾಂದರ್ಭಿಕ ಚಿತ್ರ
ಆಸ್ಕರ್ ಫರ್ನಾಂಡಿಸ್​ ಅವರ ಸಾಂದರ್ಭಿಕ ಚಿತ್ರ   

ಮಂಗಳೂರು: ಯೋಗ ಮಾಡುವ ಸಂದರ್ಭ ಬಿದ್ದು ತಲೆಗೆ ಏಟಾಗಿ ಯೇನೆಪೋಯ ಆಸ್ಪತ್ರೆಯಲ್ಲಿ ಕಳೆದೊಂದು ವಾರದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್​ ಅವರಿಗೆ (80) ಮಂಗಳವಾರ ನಸುಕಿನ ಜಾವ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಆಸ್ಕರ್ ಫರ್ನಾಂಡಿಸ್​ರ ತಲೆಯ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಮಿದುಳಿನ ರಕ್ತನಾಳದಲ್ಲಿ ಹೆಪ್ಪುಗಟ್ಟಿರುವುದನ್ನು ತೆಗೆಯಲಾಗಿದೆ. ಕಳೆದ ಒಂದು ವಾರದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಅವರಿಗೆ ಡಾ. ದಿವಾಕರ್ ರಾವ್, ಡಾ ಸುನಿಲ್ ಶೆಟ್ಟಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ರಕ್ತ ಹೆಪ್ಪುಗಟ್ಟಿರುವುದನ್ನು ತೆಗೆಯಲಾಗಿರುವುದರಿಂದ ಅವರಿಗೆ ಶೀಘ್ರ ಪ್ರಜ್ಞೆ ಮರಳುವ ನಿರೀಕ್ಷೆ ಇದೆ.

ಜುಲೈ 18 ರಂದು ಬೆಳಿಗ್ಗೆಯೋಗ ಮಾಡುವ ಸಂದರ್ಭ‌ ಆಸ್ಕರ್ ಫರ್ನಾಂಡಿಸ್ ಅವರು ನಿಯಂತ್ರಣ ತಪ್ಪಿ ಜಾರಿ ಬಿದ್ದಿದ್ದರು. ಯಾವುದೇ ಗಾಯವಾಗಿಲ್ಲವೆಂದು ಇದನ್ನು ನಿರ್ಲಕ್ಷಿಸಿದ್ದರು. ಅದೇ ದಿನ ಸಂಜೆ ಡಯಾಲಿಸಿಸ್‌ಗೆಂದು ಯೇನೆಪೊಯ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭ ಪರೀಕ್ಷಿಸಿದಾಗ ತಲೆಯ ಒಳಭಾಗಕ್ಕೆ ಪೆಟ್ಟು ಬಿದ್ದಿದ್ದು, ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ತಿಳಿಸಿದ್ದರು. ಸದ್ಯ ಆಸ್ಕರ್ ಫರ್ನಾಂಡಿಸ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.