ಸುಬ್ರಹ್ಮಣ್ಯ: ಸುಳ್ಯ ತಾಲ್ಲೂಕಿನ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ ಕರ್ತವ್ಯವನ್ನು ಆರೋಗ್ಯ ಸಚಿವ ಡಾ.ಸುಧಾಕರ್ ಶ್ಲಾಘಿಸಿದ್ದಾರೆ.
ಕೋವಿಡ್ ಪರೀಕ್ಷೆಗೆ ಗಂಟಲ ದ್ರವ ಸಂಗ್ರಹಿಸಲು ಆರೋಗ್ಯ ಇಲಾಖಾ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ದಟ್ಟವಾದ ಕಾಡಿನಲ್ಲಿ ನದಿಯ ಪಾಲ ದಾಟಿಕೊಂಡು ಹೋಗುತ್ತಿರುವ ಚಿತ್ರವನ್ನು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಟ್ವೀಟ್ ಮಾಡಿತ್ತು. ಅದನ್ನು ಉಲ್ಲೇಖಿಸಿ ಆರೋಗ್ಯ ಸಚಿವ ಸುಧಾಕರ್, ‘ಪ್ರವಾಹ ಪರಿಸ್ಥಿತಿ ನಡುವೆಯೂ ಕರ್ತವ್ಯ ಪ್ರಜ್ಞೆ ಮೆರೆದಿರುವ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯ ಸೇವಾ ಮನೋಭಾವ ಹಾಗೂ ಕಾರ್ಯತತ್ಪರತೆ ಅನುಕರಣೀಯ’ ಎಂದು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಲ್ಮಕಾರು ಗ್ರಾಮದ ಇಡ್ಯಡ್ಕ ಎಂಬ ಪ್ರದೇಶದಲ್ಲಿ ಕೋವಿಡ್ ಪರೀಕ್ಷೆಗೆ ಗಂಟಲ ಮಾದರಿ ಸಂಗ್ರಹಕ್ಕೆ ತೆರಳುತ್ತಿರುವ ಚಿತ್ರ ಇದಾಗಿದ್ದು, ಕೊಲ್ಲಮೊಗ್ರು ಆರೋಗ್ಯ ಕೇಂದ್ರದ ಲ್ಯಾಬ್ ಸಿಬ್ಬಂದಿ ನವ್ಯಾ, ಎಎನ್ಎಂ ಚಂದ್ರಾವತಿ, ಆಶಾ ಕಾರ್ಯಕರ್ತೆ ಯಶೋದಾ, ಹೇಮಾವತಿ ಅವರು ಕರ್ತವ್ಯ ಸಂದರ್ಭದಲ್ಲಿ ಪಾಲ ದಾಟುವುದನ್ನು ಇದೀಗ ಸಚಿವರು ಶ್ಲಾಘಿಸಿದ್ದಾರೆ.
ಕೊಲ್ಲಮೊಗ್ರು ಗ್ರಾಮೀಣ ಪ್ರದೇಶವಾಗಿದ್ದು, ಇಲ್ಲಿ ಜನವಸತಿ ಪ್ರದೇಶಗಳಿಗೆ ತೆರಳಲು ನದಿ, ತೋಡು, ಪಾಲ, ಸೇತುವೆ, ಕಚ್ಚಾ ರಸ್ತೆಗಳಲ್ಲಿ ಬಳಸಬೇಕಿದೆ. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮಾಡಲು ಜಿಲ್ಲಾಡಳಿತ ಕೋವಿಡ್ ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಅದರಂತೆ ಆರೋಗ್ಯ ಇಲಾಖಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.