ಬಂಟ್ವಾಳ: ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೊ–ಆಪರೇಟಿವ್ ಸೊಸೈಟಿ ಕಳೆದ ಸಾಲಿನಲ್ಲಿ ಸುಮಾರು ₹ 360.19 ಕೋಟಿ ವ್ಯವಹಾರ ನಡೆಸಿ, ₹ 1.61 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ 14ರಷ್ಟು ಲಾಭಾಂಶ ನೀಡಲಾಗುತ್ತಿದೆ ಎಂದು ಸೊಸೈಟಿ ಅಧ್ಯಕ್ಷ ನಾಗೇಶ ಕಲ್ಲಡ್ಕ ಹೇಳಿದರು.
ಇಲ್ಲಿನ ಪಾಣೆಮಂಗಳೂರಿನಲ್ಲಿ ಸುಮಂಗಲಾ ಕ್ರೆಡಿಟ್ ಕೊ–ಆಪರೇಟಿವ್ ಸೊಸೈಟಿ ವತಿಯಿಂದ ನಡೆದ 32ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
9 ಶಾಖೆಗಳನ್ನು ಹೊಂದಿರುವ ಸೊಸೈಟಿಯು ಗೃಹ ನಿರ್ಮಾಣ, ವಾಹನ ಖರೀದಿ, ಜಮೀನು ಮತ್ತು ಚಿನ್ನಾಭರಣ ಅಡಮಾನ ಸಾಲ ಸೇರಿದಂತೆ ಒಟ್ಟು ₹ 73.21 ಕೋಟಿ ಮೊತ್ತದ ಸಾಲ ವಿತರಿಸಿ ಶೇ 94ರಷ್ಟು ಸಾಲ ವಸೂಲಾತಿ ಆಗಿದೆ ಎಂದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸತತ 4ನೇ ಬಾರಿಗೆ ಸಾಧನಾ ಪ್ರಶಸ್ತಿ ಸಿಕ್ಕಿದೆ ಎಂದರು.
ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಮಾತನಾಡಿದರು.
ಸಿಇಒ ವಸಂತ ಲೆಕ್ಕಪತ್ರ ಮಂಡಿಸಿದರು. ಸಂಘದ ಉಪಾಧ್ಯಕ್ಷ ಪದ್ಮನಾಭ ಇಡ್ಕಿದು, ನಿರ್ದೇಶಕರಾದ ಕೃಷ್ಣಪ್ಪ ಗಾಣಿಗ, ಸದಾಶಿವ ಪುತ್ರನ್, ದಾಮೋದರ ಸಪಲ್ಯ, ಈಶ್ವರ ಮೆಲ್ಕಾರ್, ಸಂದೀಪ್ ಕುಮಾರ್, ರವೀಂದ್ರ ಸಪಲ್ಯ, ಶರತ್ ಎಚ್., ಯಶೋದಾ ಬಿ.ಕೆ., ಬಬಿತಾ ಮೆಲ್ಕಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.