ಮಂಗಳೂರು:ಮಂದಾರ್ತಿ ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್ಯ ಮಂಗಳವಾರ ಬೆಳಿಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರ ಮಾರಣಕಟ್ಟೆಯಲ್ಲಿ ನಡೆದ ಯಕ್ಷಗಾನದಲ್ಲಿ ಭಾಗವತಿಕೆ ಮಾಡಿದ್ದ ಸುಬ್ರಹ್ಮಣ್ಯ ಆಚಾರ್ಯ, ಮಂಗಳವಾರ ಬೆಳಿಗ್ಗೆ ಮಂಗಳೂರಿಗೆ ಬಂದಿದ್ದರು. ಇಲ್ಲಿನ ಕುಲಶೇಖರದ ಸಂತೋಷ್ ಎಂಬ ಯಕ್ಷಗಾನ ಕಲಾವಿದರ ಮನೆಗೆ ಬಂದು ವಿಷ ಸೇವಿಸಿದ್ದರು. ಬಳಿಕ ಅವರನ್ನು ಚಿಕಿತ್ಸೆಗಾಗಿ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಭಾಗವತ ಆಚಾರ್ಯ ಮೃತಪಟ್ಟಿರುವ ಕುರಿತು ಆಸ್ಪತ್ರೆ ಸಿಬ್ಬಂದಿ ಕೆಲ ಹೊತ್ತಿನ ಹಿಂದೆ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮೃತರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ನಗರದವರು. ಉಡುಪಿಯ ಸಂತೆಕಟ್ಟೆಯಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಯಕ್ಷ ಶಿಕ್ಷಣ ಭೋದನೆ
ಭಾಗವತ ಆಚಾರ್ಯರುಯಕ್ಷ ಶಿಕ್ಷಣ ಸಂಸ್ಥೆಯಲ್ಲಿ ಎರಡು ವರ್ಷ ಮಕ್ಕಳಿಗೆ ಯಕ್ಷ ಶಿಕ್ಷಣ ಬೋಧಿಸಿದ್ದರು. ಉತ್ತಮ ಪರಂಪರೆಯ ಭಾಗವತರಲ್ಲಿ ಸುಬ್ರಹ್ಮಣ್ಯ ಆಚಾರ್ಯರು ಅಂಗ್ರಪಂಕ್ತಿಯಲ್ಲಿ ನಿಲ್ಲುವಂಥವರು. ‘ನಡುಮನೆ’ ಯಕ್ಷಗಾನ ಪ್ರಯೋಗ ಮಾಡಿ ಸೈ ಎನಿಸಿಕೊಂಡಿದ್ದ ಆಚಾರ್ಯರು, ಮನೆಮನೆಗೂ ಯಕ್ಷಗಾನವನ್ನು ಮುಟ್ಟಿಸುವಲ್ಲಿ ಬಹಳವಾಗಿ ಶ್ರಮಿಸಿದ್ದರು.
ಬಡಗುತಿಟ್ಟಿನ ಸಮರ್ಥ ಭಾಗವತಾಗಿದ್ದ ಸುಬ್ರಹ್ಮಣ್ಯ ಆಚಾರ್ಯರು ಹಳೆಯ ಸಂಪ್ರದಾಯ ಹಾಗೂ ಪ್ರಸಂಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಕಲಾವಿದರಾಗಿದ್ದರು. ಯಕ್ಷಗಾನೀಯವಾದ ಸ್ವರ ಅವರ ಬಹುದೊಡ್ಡ ಶಕ್ತಿಯಾಗಿತ್ತು. ಕುಂಚಾಲು ಶೈಲಿಯ ಹಾಡುಗಾರಿಕೆಯಲ್ಲಿ ನಿಷ್ಣಾತರಾಗಿದ್ದರು ಎಂದು ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.