ಹಲ್ಲೆ
(ಪ್ರಾತಿನಿಧಿಕ ಚಿತ್ರ)
ಪುತ್ತೂರು: ಮಳೆ-ಗಾಳಿಯಿಂದ ಹಾನಿಗೀಡಾದ ಮನೆಯೊಂದನ್ನು ವೀಕ್ಷಿಸಲು ತೆರಳಿದ್ದ ಕೆಯ್ಯೂರು ಗ್ರಾಮ ಪಂಚಾಯಿತಿಯ ಸದಸ್ಯ, ಮಾಜಿ ಸದಸ್ಯರಾಗಿರುವ ಮೂವರು ಕಾಂಗ್ರೆಸ್ ಮುಖಂಡರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ಕೆಯ್ಯೂರು ಗ್ರಾಮದ ಸಂತೋಷನಗರ ಸಮೀಪದ ಪಾತುಂಜ ಎಂಬಲ್ಲಿ ನಡೆದಿದೆ.
ಕೆಯ್ಯೂರು ಗ್ರಾಮದ ಸಂತೋಷನಗರ ಸಮೀಪದ ಪಾತುಂಜ ಎಂಬಲ್ಲಿ ಅಬ್ದುಲ್ ಖಾದರ್ ಎಂಬುವರ ಹಳೆಯ ಹೆಂಚಿನ ಮನೆಯ ಚಾವಣಿ ಶನಿವಾರ ಕುಸಿದಿತ್ತು. ಮನೆ ಪರಿಶೀಲಿಸಲು ಕೆಯ್ಯೂರು ಗ್ರಾಮ ಪಂಚಾಯಿತಿಯ ಸದಸ್ಯ, ವಲಯ ಕಾಂಗ್ರೆಸ್ ಅಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲು, ಕೆಯ್ಯೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಎ.ಕೆ.ಜಯರಾಮ ರೈ ಮತ್ತು ಕೆಯ್ಯೂರು ಗ್ರಾ.ಪಂ. ಮಾಜಿ ಸದಸ್ಯ, ಉದ್ಯಮಿ ಹನೀಫ್ ಕೆ.ಎಂ. ಅವರು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ನೆರೆಯ ನಿವಾಸಿ ಹ್ಯಾರೀಸ್ ಎಂಬುವರ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿ ಹನೀಫ್ ಕೆ.ಎಂ. ಅವರು ನೀಡಿರುವ ದೂರಿನಂತೆ ಸಂಪ್ಯ ಠಾಣೆ ಪೊಲೀಸರು ಹ್ಯಾರೀಸ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹನೀಫ್ ಕೆ.ಎಂ., ಹ್ಯಾರೀಸ್ ನಡುವೆ ಹಳೆಯ ದ್ವೇಷದ ವೈಮನಸ್ಸು ಇದ್ದು, ಇದೇ ಕಾರಣದಲ್ಲಿ ಆತ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.