ಮಂಗಳೂರಿನಲ್ಲಿ ಮುನವ್ವರ್ ಜೋಗಿಬೆಟ್ಟು ಅವರ ಕಥಾ ಸಂಕಲನ ‘ಟಚ್ ಮೀ ನಾಟ್’ ಬಿಡುಗಡೆ ಮಾಡಲಾಯಿತು
ಮಂಗಳೂರು: ಈ ಜಗತ್ತಿನಲ್ಲಿ ಕಡ್ಡಾಯವಾಗಿ ಓದಲೇಬೇಕು ಎಂಬುದು ಏನೂ ಇಲ್ಲ. ಮನಸ್ಸಿಗೆ ತಟ್ಟುವಂತದ್ದು ಅನ್ನುವುದು ಬಿಡಿ; ಸಾಹಿತ್ಯ ಮನಸ್ಸಿಗೆ ಮುಟ್ಟಿದರೆ ಸಾಕು ಎಂದು ಬಾಲಸುಬ್ರಹ್ಮಣ್ಯ ಕಂಜರ್ಪಣೆ ಹೇಳಿದರು.
ಇಲ್ಲಿಯ ಸೇಂಟ್ ಆಲೋಶಿಯಸ್ ಕಾಲೇಜಿನ ರಾಬರ್ಟ್ ಸೀಕ್ವೇರ ಸಭಾಂಗಣದಲ್ಲಿ ನಡೆದ ‘ಸಸಿ ಪ್ರಕಾಶನ’ದ ಕಥೆಗಾರ ಮುನವ್ವರ್ ಜೋಗಿಬೆಟ್ಟು ಅವರ ಎರಡನೇ ಕಥಾ ಸಂಕಲನ ‘ಟಚ್ ಮೀ ನಾಟ್’ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸುಧಾ ಆಡುಕಳಾ ಮಾತನಾಡಿ, ‘ಮುನವ್ವರ್ ಅವರ ಭಾಷೆ ಅದ್ಭುತವಾಗಿದ್ದು. ಅವರು ಆಯ್ದುಕೊಳ್ಳುವ ಕಥಾವಸ್ತುಗಳು ಅವರನ್ನು ಈ ಕಾಲದ ಗಟ್ಟಿ ಕಥೆಗಾರರ ಸಾಲಿನಲ್ಲಿ ನಿಲ್ಲಿಸುತ್ತವೆ’ ಎಂದರು.
ಕಥೆಗಾರ ಮುನವ್ವರ್ ಜೋಗಿಬೆಟ್ಟು ಮಾತನಾಡಿ, ‘ಜಗತ್ತಿನಲ್ಲಿರೋದು ಎರಡೇ ಜಾತಿ. ಒಂದು ಉಳ್ಳವರ ಜಾತಿ ಮತ್ತೊಂದು ಉಳ್ಳದೇ ಇರುವವರ ಜಾತಿ. ನನಗೆ ಮನುಷ್ಯನ ನೋವು ಕಾಡುತ್ತದೆ. ಆಗಾಗಿ ನನ್ನ ಕತೆಗಳು ನೋವಿನ ಕತೆಗಳಾಗಿವೆ’ ಎನ್ನುತ್ತ ಇತ್ತೀಚೆಗೆ ಕಳೆದುಕೊಂಡ ತಮ್ಮ ತಂದೆಯನ್ನು ನೆನಪಿಸಿಕೊಂಡರು.
ಪ್ರಕಾಶಕರಾದ ಜಯರಾಮಚಾರಿ, ‘ಮುನವ್ವರ್ ಕತೆಗಳು ಮನಸ್ಸನ್ನು ತಟ್ಟುತ್ತವೆ ಮತ್ತು ಮನಸ್ಸನ್ನು ಮುಟ್ಟುತ್ತವೆ’ ಎಂದರು. ಸೈಫ್ ಕಾರ್ಯಕ್ರಮ ನಿರೂಪಿಸಿದರು. ಜೋಗಿಬೆಟ್ಟು ಮಸೀದಿಯ ಪದಾಧಿಕಾರಿಗಳು ಮುನವ್ವರ್ ಅವರನ್ನು ಸನ್ಮಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.