
ಮಂಗಳೂರು: ಬರಹಗಾರ್ತಿ ಅಕ್ಷತಾ ರಾಜ್ ಪೆರ್ಲ ಅವರ ‘ಮಂದಾರ ಮಲಕ’ ಮತ್ತು ಬರಹಗಾರ ಬಾಲಕೃಷ್ಣ ಕೊಡವೂರು ಅವರ ‘ಮಾಯದಪ್ಪೆ ಮಾಯಕಂದಾಲ್’ ತುಳು ನಾಟಕ ಕೃತಿಗಳು ಶುಕ್ರವಾರ ಇಲ್ಲಿ ಲೋಕಾರ್ಪಣೆಗೊಂಡವು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ರಂಗಕರ್ಮಿ ವಿಜಯಕಯಮಾರ್ ಕೊಡಿಯಾಲ್ಬೈಲ್ ಅವರು, ‘ಗಂಭೀರ ನಾಟಕಗಳತ್ತ ಪ್ರೇಕ್ಷಕರು ಒಲವು ತೋರುತ್ತಿರುವ ಸಂದರ್ಭದಲ್ಲಿ ಇವೆರಡು ಕೃತಿಗಳು ಬಿಡುಗಡೆಯಾಗಿರುವುದು ಸಕಾಲಿಕವಾಗಿದೆ. ಕೃತಿಗಳ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಇವು ರಂಗಕ್ಕೆ ಇಳಿಯಲಿ’ ಎಂದು ಆಶಿಸಿದರು.
‘ಮಂದಾರ ಮಲಕ’ ಕೃತಿ ಪರಿಚಯಿಸಿದ ಪ್ರೊ. ಮೀನಾಕ್ಷಿ ರಾಮಚಂದ್ರ ಅವರು, ‘ತುಳುವಿನ ವಾಲ್ಮೀಕಿ ಎಂದೇ ಖ್ಯಾತರಾಗಿರುವ ಮಂದಾರ ಕೇಶವ ಭಟ್ ಅವರ 446 ಪುಟಗಳ ‘ಮಂದಾರ ರಾಮಾಯಣ’ ಕೃತಿಯನ್ನು ಅಕ್ಷತಾ ರಾಜ್ ಅವರು ನಾಟಕ ರೂಪಕ್ಕೆ ಇಳಿಸಿದ್ದಾರೆ. ಮೂಲ ರಾಮಾಯಣಕ್ಕೆ ಕುಂದುಬಾರದಂತೆ ನಾಟಕ ನಿರೂಪಣೆ ಮಾಡಲಾಗಿದೆ. ನಾಟಕದಲ್ಲಿ ಸ್ತ್ರೀ ಪಾತ್ರಗಳು ಹೆಚ್ಚು ಪ್ರಭಾವ ಬೀರಿವೆ. ಮಂಥರೆ, ಶೂರ್ಪನಖಿ, ಶಬರಿಯಂತಹ ಸ್ತ್ರೀ ಪಾತ್ರಗಳ ನಿರೂಪಣೆಯು ಓದುಗನಲ್ಲಿ ಹೊಸ ಹೊಳಹು ಮೂಡಿಸುತ್ತದೆ’ ಎಂದರು.
‘ಮಾಯದಪ್ಪೆ ಮಾಯಕಂದಾಲ್’ ಕೃತಿ ಪರಿಚಯಿಸಿದ ವಕೀಲ ಶಶಿರಾಜ್ ಕಾವೂರು ಅವರು, ‘ಪಾಡ್ದನ ಶೈಲಿಯ ಜನಪದ ನಾಟಕ ಇದಾಗಿದ್ದು, ಪ್ರತಿ ದೃಶ್ಯವೂ ರೋಚಕವಾಗಿದೆ. ತುಳು ಭಾಷೆಯ ಅಪೂರ್ವ ಪದಗಳು ಗಮನಸೆಳೆಯುತ್ತವೆ. ತುಳು ಅಕಾಡೆಮಿಯು ತುಳು ನಾಟಕಗಳ ಪ್ರಕಟಣೆಗೆ ಒಲವು ತೋರಬೇಕು’ ಎಂದರು.
ಪತ್ರಕರ್ತ ಮಂದಾರ ರಾಜೇಶ್ ಭಟ್ ಇದ್ದರು. ಅಕ್ಷತಾ ರಾಜ್ ಪೆರ್ಲ ಸ್ವಾಗತಿಸಿದರು. ಬಾಲಕೃಷ್ಣ ಕೊಡವೂರು ವಂದಿಸಿದರು. ವಿ.ಕೆ. ಕಡಬ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.