ಮಂಗಳೂರು: ನಗರದ ಹೊರವಲಯದ ಉಳಾಯಿಬೆಟ್ಟುವಿನಲ್ಲಿ ಶನಿವಾರ ಸಂಜೆ ಗುಂಪೊಂದು ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಗಂಭೀರವಾಗಿ ಗಾಯಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಳಾಯಿಬೆಟ್ಟು ನಿವಾಸಿ ಪ್ರಮೀತ್ (26) ಹಲ್ಲೆಗೊಳಗಾದವರು. ಉಳಾಯಿಬೆಟ್ಟು ಶಿವರಾತ್ರಿಬೆಟ್ಟು ನಿವಾಸಿಗಳಾದ ಸುಹಾಸ್ (27) ಮತ್ತು ಸಾಗರ್ (23) ಬಂಧಿತರು. ಪ್ರಮೋದ್ (27) ಎಂಬಾತ ಪರಾರಿಯಾಗಿದ್ದಾನೆ.
ಕ್ರಿಕೆಟ್ ಆಟದ ವಿಚಾರದಲ್ಲಿ ಎರಡು ಗುಂಪಿನ ನಡುವೆ ಮನಸ್ತಾಪ ಇತ್ತು. ಹಲ್ಲೆಗೊಳಗಾಗಿರುವ ಪ್ರಮೀತ್ನ ಗೆಳೆಯ ಯತೀಶ್ ಎಂಬಾತ ಶನಿವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಸುಹಾಸ್, ಸಾಗರ್ ಮತ್ತು ಪ್ರಮೋದ್ ಅಡ್ಡಗಟ್ಟಿ ನಿಂದಿಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಕಾರ್ತಿಕ್ ಎಂಬಾತನ ಜೊತೆ ಅಲ್ಲಿಗೆ ಹೋದ ಪ್ರಮೀತ್ ಮೂವರನ್ನೂ ತರಾಟೆಗೆ ತೆಗೆದುಕೊಂಡಿದ್ದ. ಅಷ್ಟರಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿದ್ದರು. ಆಗ ಯುವಕರು ಪರಾರಿಯಾಗಿದ್ದರು.
ಮನೆಗೆ ತೆರಳಿದ್ದ ಪ್ರಮೀತ್, ರಾತ್ರಿ ನಿದ್ರಿಸುತ್ತಿದ್ದ. ಮನೆಯ ಅಂಗಳಕ್ಕೆ ಹೋದ ಸುಹಾಸ್, ಸಾಗರ್ ಮತ್ತು ಪ್ರಮೋದ್ ಹೊರಬರುವಂತೆ ಕರೆದಿದ್ದಾರೆ. ಎದ್ದುಬಂದ ಪ್ರಮೀತ್ ಮೇಲೆ ಕಲ್ಲು ಮತ್ತು ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಆತನ ಮನೆಯವರು ಕಿರುಚಿಕೊಳ್ಳುತ್ತಿದ್ದಂತೆ ಸ್ಥಳದಿಂದ ಓಡಿಹೋಗಿದ್ದರು. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದರು. ಪ್ರಮೀತ್ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.