ಮಂಗಳೂರು: ಸುರತ್ಕಲ್ ಲೈಟ್ಹೌಸ್ನಿಂದ 42 ನಾಟಿಕಲ್ ಮೈಲಿ ದೂರದ ಅರಬ್ಬಿ ಸಮುದ್ರದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಬೋಟ್ ಅಪಘಾತದಲ್ಲಿ ನಾಪತ್ತೆಯಾಗಿರುವ ಒಂಬತ್ತು ಮೀನುಗಾರರು ಪೈಕಿ, ಮತ್ತಿಬ್ಬರ ಶವ ಶುಕ್ರವಾರ ಪತ್ತೆಯಾಗಿವೆ. ಇನ್ನು 7 ಜನರಿಗೆ ಶೋಧ ಮುಂದುವರಿಸಿದೆ.
ನೌಕಾಪಡೆಯ ‘ಐಎನ್ಎಸ್ ನಿರೀಕ್ಷಕ್’ ಹಡಗಿನಲ್ಲಿ ಕಾರ್ಯಾಚರಣೆ ಮಾಡುವಾಗ ಎರಡು ಮೃತದೇಹಗಳು ಸಿಕ್ಕಿವೆ. ತಕ್ಷಣ ಎನ್ಎಂಪಿಟಿ ಬಂದರಿಗೆ ತಂದಿದ್ದು, ಕರಾವಳಿ ಕಾವಲು ಪೊಲೀಸ್ ಪಡೆಗೆ ಹಸ್ತಾಂತರ ಮಾಡಲಾಗಿದೆ. ನಾಲ್ಕು ದಿನಗಳಿಂದ ಈ ಮೃತದೇಹಗಳು ನೀರಿನಲ್ಲಿದ್ದ ಕಾರಣ ಗುರುತು ಪತ್ತೆ ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಾವಳಿ ಕಾವಲು ಪಡೆ, ಕರಾವಳಿ ಕಾವಲು ಪೊಲೀಸ್ ಪಡೆ, ಕಾರವಾರದ ನೌಕಾನೆಲೆಯ ಹಡಗು, ಹೆಲಿಕಾಪ್ಟರ್ ಮೂಲಕ ಶೋಧ ಮಾಡಲಾಗುತ್ತಿದೆ. ಕೇರಳದ ನಾಲ್ಕೈದು ಬೋಟ್ಗಳು ನಿರಂತರ ಶೋಧ ಕಾರ್ಯ ನಡೆಸಿವೆ. ನಾಲ್ಕು ದಿನಗಳಿಂದ ನಿರಂತರ ಹುಡುಕಾಟ ನಡೆಸಿದರೂ ಮೀನುಗಾರರ ಪತ್ತೆಯಾಗಿರಲಿಲ್ಲ.
ನಾಪತ್ತೆಯಾದ ಮೀನುಗಾರರ ಕುಟುಂಬದ ಸದಸ್ಯರು ಮಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದು, ನಾಪತ್ತೆಯಾದವರ ಕುರಿತು ಮತ್ತಷ್ಟು ವಿವರಗಳನ್ನು ಪಡೆಯಲು ಪ್ರಯತ್ನಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.