ADVERTISEMENT

ಮುಖ್ಯಮಂತ್ರಿ ಬದಲಾವಣೆ ಮಾಹಿತಿ ಇಲ್ಲ: ನಳಿನ್‌ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 3:05 IST
Last Updated 26 ಜುಲೈ 2021, 3:05 IST

ಮಂಗಳೂರು: ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನನಗೆ ಈವರೆಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ನಾನು ಹೆಚ್ಚೇನು ಉಲ್ಲೇಖಿಸುವುದಿಲ್ಲ. ಕಾದು ನೋಡಿ ಎಂದು ಯಡಿಯೂರಪ್ಪ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಭಾನುವಾರ ಇಲ್ಲಿ ಪ್ರತಿಕ್ರಿಯಿಸಿದರು.

ನಗರದ ಯೇನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಆರೋಗ್ಯ ವಿಚಾರಿಸಿದ ಬಳಿಕ ಅವರು ಮಾತನಾಡಿದರು. ‘ಮುಖ್ಯಮಂತ್ರಿಯಾಗಿ ಸರ್ಕಾರ ಎರಡು ವರ್ಷ ಪೂರೈಸುತ್ತಿದೆ. ಹಲವಾರು ಸವಾಲುಗಳ ನಡುವೆ ಸರ್ಕಾರ ಒಳ್ಳೆಯ ಆಡಳಿತ ನೀಡಿದೆ. ಈ ವೇಳೆ ನಾನು ಸರ್ಕಾರವನ್ನು ಅಭಿನಂದಿಸುತ್ತೇನೆ. ಪಕ್ಷ ಹೇಳುವುದನ್ನು ಪಾಲಿಸುತ್ತೇನೆ ಎಂದಿರುವ ಯಡಿಯೂರಪ್ಪ ನಮಗೆಲ್ಲ ಆದರ್ಶ ವ್ಯಕ್ತಿ. ರಾಷ್ಟ್ರೀಯ ನಾಯಕರು, ಪಕ್ಷದ ಹಿರಿಯರ ಮಾತಿಗೆ ಗೌರವ ನೀಡುವ ಅವರ ನಡೆ ಕಾರ್ಯಕರ್ತರಿಗೆ ಪ್ರೇರಣೆ’ ಎಂದರು.

‘ಅಂಗನವಾಡಿಗೆ ಮೊಟ್ಟೆ ಪೂರೈಸುವಲ್ಲಿ ಆಗಿರುವ ಅವ್ಯಹಾರ ಆರೋಪದ ಕುರಿತು ಸಚಿವೆ ಶಶಿಕಲಾ ಜೊಲ್ಲೆ ಅವರಿಂದ ಮಾಹಿತಿ ಪಡೆದ ಮೇಲೆ ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.