ADVERTISEMENT

ಉಪ್ಪಿನಂಗಡಿ | ಎಲ್ಲೆಡೆ ಬೆಕ್ಕು, ನಾಯಿ ಕಳೇಬರ: ಕ್ರಮ ಕೈಗೊಳ್ಳಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 3:10 IST
Last Updated 9 ಜನವರಿ 2026, 3:10 IST
ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಭೆ ಅಧ್ಯಕ್ಷೆ ಲಲಿತಾ ಅಧ್ಯಕ್ಷತೆಯಲ್ಲಿ ನಡೆಯಿತು
ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಭೆ ಅಧ್ಯಕ್ಷೆ ಲಲಿತಾ ಅಧ್ಯಕ್ಷತೆಯಲ್ಲಿ ನಡೆಯಿತು   

ಉಪ್ಪಿನಂಗಡಿ: ಪಂಚಾಯಿತಿ ವ್ಯಾಪ್ತಿಯಲ್ಲಿ, ಹೆದ್ದಾರಿ ಬದಿಯಲ್ಲಿ ತ್ಯಾಜ್ಯದ ಜತೆಗೆ ಬೆಕ್ಕು, ನಾಯಿ, ಹಂದಿಯ ಕಳೇಬರ ತಂದು ಹಾಕುತ್ತಿದ್ದು, ಗಬ್ಬು ವಾಸನೆ ಬೀರುತ್ತಿದೆ. ಮುಂದೊಂದು ದಿನ ಸಾಂಕ್ರಾಮಿಕ ರೋಗಗಳಿಗೂ ಇದು ಕಾರಣವಾಗುವ ಸಾಧ್ಯತೆ ಇದೆ. ಪರಿಸರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.

ಅಧ್ಯಕ್ಷೆ ಲಲಿತ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

‘ರಾತ್ರಿ ಬೆಳಗಾಗುವುದರ ಒಳಗಾಗಿ ವಾಹನಗಳಲ್ಲಿ ಬಂದು ರಸ್ತೆ ಬದಿಯಲ್ಲಿ ಕಸ ಎಸೆದು ಹೋಗುತ್ತಾರೆ. ಕಸವನ್ನು ನಾಯಿಗಳು ಎಳೆದು ತಿಂದು ಎಲ್ಲೆಡೆ ಚೆಲ್ಲಾಡುತ್ತವೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ’ ಎಂದರು.

ADVERTISEMENT

ಈ ಬಗ್ಗೆ ಹಿಂದಿನ ಸಭೆಯಲ್ಲೂ ಚರ್ಚೆ ಆಗಿದೆ. ಪಂಚಾಯಿತಿ ವ್ಯಾಪ್ತಿಯ ನಾಲಾಯದ ಗುಂಡಿ, ಮಠ, ಹಿರ್ತಡ್ಕ ಹಾಗೂ ಕೂಟೇಲಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ನಿರ್ಣಯ ಅಂಗೀಕರಿಸಲಾಗಿದೆ. ಆದರೆ, ಕಾರ್ಯರೂಪಕ್ಕೆ ಬಂದಿಲ್ಲ ಎಂದರು.

ಆಗ ಪಿಡಿಒ ಪ್ರತಿಕ್ರಿಯಿಸಿ ಸಿಸಿಟಿವಿ ಕ್ಯಾಮರಾ ಖರೀದಿಸಲು ಕ್ರಿಯಾ ಯೋಜನೆ ಆಗಿಲ್ಲ ಎಂದರು.

ಸದಸ್ಯರು ಮತ್ತೆ ಪ್ರತಿಕ್ರಿಯಿಸಿ, ಕ್ರಿಯಾಯೋಜನೆ ಆಗಿಯೂ ಕೆಲಸ ಆಗಿಲ್ಲ. ಉಳಿಕೆಯಾಗಿರುವ ಹಣದಿಂದ ಸಿಸಿಟಿವಿ ಕ್ಯಾಮೆರಾ ಖರೀದಿಸಿ ಹೆದ್ದಾರಿಯ ಪಂಜಾಲ ಪೆಟ್ರೋಲ್ ಬಂಕ್ ಬಳಿಯಿಂದ ಮಠದ ವರೆಗೆ ಅಳವಡಿಸಬೇಕು ಎಂದರು.

9/11 ನೀಡಲು ಸತಾಯಿಸಬೇಡಿ: ಮಠ, ಕೆರೆಮೂಲೆಯ ಅಬ್ಬಾಸ್ ಎಂಬುವರು ಮನೆ ನಿರ್ಮಿಸುವ ಸಂಬಂಧ 9/11ಗೆ 2024ರಲ್ಲಿ ಅರ್ಜಿ ಸಲ್ಲಿಸಿದ್ದರೂ ಸ್ಪಂದನೆ ಸಿಕ್ಕಿಲ್ಲ. ಬಡವರನ್ನು ಯಾಕಾಗಿ ಈ ರೀತಿ ಸತಾಯಿಸುತ್ತೀರಿ ಎಂದು ಪಿಡಿಒ ಅವರನ್ನು ಪ್ರಶ್ನಿಸಿದರು. ಪಿಡಿಒ ಪ್ರತಿಕ್ರಿಯಿಸಿ, ಪ್ರಕ್ರಿಯೆ ನಡೆಯುತ್ತಿದೆ ಎಂದರು. 

ಮಲಿನ ನೀರು ಚರಂಡಿಗೆ: ಪಂಚಾಯಿತಿ ವ್ಯಾಪ್ತಿಯ ಕೆನರಾ ಫ್ಲಾಟ್‌ನಿಂದ ತ್ಯಾಜ್ಯ ನೀರನ್ನು ಚರಂಡಿಗೆ ಬಿಡುತ್ತಿದ್ದು, ಸುತ್ತಮುತ್ತ ಇರುವ ಮನೆಗಳಿಗೆ ಹಾಗೂ ಅಂಗನವಾಡಿಗೆ ತೊಂದರೆಯಾಗುತ್ತಿದೆ. ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳುವ ಬಗ್ಗೆ ಹಿಂದಿನ ಸಭೆಯಲ್ಲಿ ನಿರ್ಣಯವಾಗಿದೆ. ಆದರೆ, ಅಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಪಂಚಾಯಿತಿ ಸದಸ್ಯರಾದ ಅಬ್ದುಲ್ ರಹಿಮಾನ್, ಸುರೇಶ್ ಅತ್ರಮಜಲು, ಯು.ಟಿ.ತೌಸೀಫ್, ಉಷಾ ಮುಳಿಯ, ಅಬ್ದುಲ್ ರಶೀದ್, ಲೋಕೇಶ್ ಬೆತ್ತೋಡಿ ಮಾತನಾಡಿದರು.

ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಯು.ಕೆ.ಇಬ್ರಾಹಿಂ, ಧನಂಜಯ ನಟ್ಟಿಬೈಲು, ಸಂಜೀವ ಮಡಿವಾಳ, ಇಬ್ರಾಹಿಂ ಮೈಸಿದಿ, ಉಷಾ, ಶೋಭಾ, ರುಕ್ಮಿಣಿ, ವನಿತಾ, ಜಯಂತಿ ಭಾಗವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರಾಡ್ರಿಗಸ್ ಸ್ವಾಗತಿಸಿ, ಕಾರ್ಯದರ್ಶಿ ಗೀತಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.