ADVERTISEMENT

ಕುಕ್ಕೆ: ಕಳ್ಳರಿಗಿಲ್ಲ ಇಲ್ಲಿ ಕಣ್ಗಾವಲು!

ವಾಹನ ಕಳ್ಳತನ, ಕಟ್ಟಡ ಕೆಡವಿದ್ದು ಕೃತ್ಯಕ್ಕೆ ವರದಾನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 4:05 IST
Last Updated 30 ಸೆಪ್ಟೆಂಬರ್ 2020, 4:05 IST
ಸುಬ್ರಹ್ಮಣ್ಯ ಆಂಜನೇಯ ದೇವಸ್ಥಾನ ಬಳಿ ಇರುವ ವಾಹನ ನಿಲುಗಡೆ ಪ್ರದೇಶ
ಸುಬ್ರಹ್ಮಣ್ಯ ಆಂಜನೇಯ ದೇವಸ್ಥಾನ ಬಳಿ ಇರುವ ವಾಹನ ನಿಲುಗಡೆ ಪ್ರದೇಶ   

ಸುಬ್ರಹ್ಮಣ್ಯ: ಕಡಬ ತಾಲ್ಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಯಾತ್ರಿಕರು ಬರುವ ಖಾಸಗಿ ವಾಹನಗಳಿಗೆ ಈಗ ಇಲ್ಲಿ ರಕ್ಷಣೆ ಇಲ್ಲದಾಗಿದೆ. 10 ದಿನಗಳ ಅಂತರದಲ್ಲಿ ಎರಡು ವಾಹನಗಳು ಕಳವಾಗಿರುವ ಬಗ್ಗೆ ದೂರು ದಾಖಲಾಗಿದೆ.

ಭಕ್ತರ ವಾಹನ ನಿಲುಗಡೆಗೆ ದೇವಳದ ರಥಬೀದಿ ಬಳಿಯ ಆಂಜನೇಯ ದೇವಸ್ಥಾನದ ಬಳಿ ಹಾಗೂ ಪಕ್ಕದ ಸವಾರಿ ಮಂಟಪ ಬಳಿ ಜಾಗವಿದೆ. ಇಲ್ಲಿ ಸುಮಾರು 300-400 ವಾಹನ ನಿಲ್ಲಿಸಲು ಅವಕಾಶವಿದೆ. ಪೊಲೀಸ್ ಹಾಗೂ ಗೃಹರಕ್ಷಕ ದಳದ ವತಿಯಿಂದ ಇಲ್ಲಿ ಗಸ್ತು ವ್ಯವಸ್ಥೆ ಮಾಡಲಾಗಿದೆ. ಯಾತ್ರಿಕರ ಚಲನವಲನದ ಮೇಲೆ ದೃಷ್ಟಿಯಿಡುವ ಉದ್ದೇಶದಿಂದ ಇಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ದೇವಳದ ಒಳಭಾಗದಲ್ಲಿ 90 ಹಾಗೂ ಪೇಟೆಯ ಪ್ರಮುಖ ಸ್ಥಳಗಳಲ್ಲಿ ನಾಲ್ಕು ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿದ್ದವು. ಅಭಿವೃದ್ಧಿ ಕಾಮಗಾರಿ ಕಾರಣಕ್ಕೆ ಪೇಟೆಯಲ್ಲಿ ಅಳವಡಿಸುವ ಅವನ್ನು ತೆರವುಗೊಳಿಸಲಾಗಿದೆ. ಇದು ವಾಹನ ಕಳ್ಳತನಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನುತ್ತಾರೆ ಸ್ಥಳೀಯರು.

ಕಳ್ಳರು ನಕಲಿ ಚಾವಿ ಬಳಸಿ ವಾಹನ ಕಳ್ಳತನ ಮಾಡುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದೇ 19ರಂದು ಬೆಳ್ತಂಗಡಿಯ ಒಬ್ಬರು ಹಾಗೂ ಇದೇ 27ರಂದು ಕುಂದಾಪುರದ ವ್ಯಕ್ತಿಯೊಬ್ಬರ ಓಮ್ನಿ ಕಾರು ಕಳವಾದ ಬಗ್ಗೆ ದೂರು ದಾಖಲಾಗಿದೆ. ಕಳೆದ ಷಷ್ಠಿ ಸಂದರ್ಭದಲ್ಲೂ ಒಂದು ವಾಹನ ಕಳವಾದ ಬಗ್ಗೆ ದೂರು ದಾಖಲಾಗಿತ್ತು. ಪೊಲೀಸ್ ಇಲಾಖೆ, ಸ್ಥಳೀಯ ಆಡಳಿತ ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

‘ಅಭಿವೃದ್ಧಿ ಕಾಮಗಾರಿ ನಡೆಸಲು ಪೇಟೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ತೆಗೆಯಲಾಗಿದೆ. ಇದು ಕಳ್ಳರ ಚಲನವಲನದ ಮೇಲೆ ಕಣ್ಣಿಡಲು ಅಡ್ಡಿಯಾಗಿದೆ. ಅಲ್ಲದೇ ಠಾಣೆಯಲ್ಲಿ ಸಿಬ್ಬಂದಿ ಕೊರತೆಯೂ ಇದೆ ಎನ್ನುತ್ತಾರೆ ಉಪನಿರೀಕ್ಷಕ ಓಮನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.