ಮಂಗಳೂರು: ‘ಹಿಂದೂಗಳ ಶ್ರದ್ಧಾಕೇಂದ್ರವಾದ ದತ್ತಪೀಠವನ್ನು ಹಿಂದೂಗಳ ಸುಪರ್ದಿಗೆ ವಹಿಸುವಂತೆ ಒತ್ತಾಯಿಸಿ ಹಾಗೂ ದತ್ತಪೀಠದಲ್ಲಿ ಇಸ್ಲಾಂ ಧರ್ಮದ ಯಾವುದೇ ಚಟುವಟಿಕೆಗೆ ಅವಕಾಶ ನೀಡದಂತೆ ಆಗ್ರಹಿಸಿ ದತ್ತಮಾಲಾ ಅಭಿಯಾನವನ್ನು ನಗರದಲ್ಲಿ ಹಮ್ಮಿಕೊಂಡಿದ್ದೇವೆ’ ಎಂದು ವಿಶ್ವ ಹಿಂದೂ ಪರಿಷತ್ನ ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಇದೇ 12ರಂದು ದತ್ತಪೀಠದಲ್ಲಿ ಅನಸೂಯದೇವಿ ಪೂಜೆ ಹಾಗೂ ಇದೇ 13ರಂದು ಚಿಕ್ಕಮಗಳೂರಿನಲ್ಲಿ ದತ್ತಾತ್ರೇಯ ಶೋಭಾಯಾತ್ರೆ ಹಾಗೂ ಇದೇ 14ರಂದು ದತ್ತಪೀಠದಲ್ಲಿ ಹೋಮ, ಪೂಜೆ ಹಾಗೂ ದತ್ತ ಪಾದುಕೆ ದರ್ಶನ ನಡೆಯಲಿದೆ. ದತ್ತಮಾಲಾ ಅಭಿಯಾನದ ಅಂಗವಾಗಿ ನಗರದಲ್ಲಿ ಇದೇ 12ರಂದು ಬೆಳಿಗ್ಗೆ 9.30ರಿಂದ ಮಹಿಳೆಯರಿಂದ ಸಂಕೀರ್ತನ ಯಾತ್ರೆ ನಡೆಯಲಿದೆ. ಇದೇ 13ರಂದು ಮಂಗಳಾದೇವಿ ದೇವಸ್ಥಾನದ ಬಳಿಯಿಂದ ಯಾತ್ರೆ ಹೊರಡಲಿದೆ. ಮಂಗಳೂರು ವಿಭಾಗದಿಂದ 3500ಕ್ಕೂ ಅಧಿಕ ದತ್ತಮಾಲಾಧಾರಿಗಳು ಭಾಗವಹಿಸಲಿದ್ದಾರೆ’ ಎಂದರು.
‘ದತ್ತಪೀಠ ಮತ್ತು ಪರಿಸರವನ್ನು ಹಿಂದೂಗಳ ಪುಣ್ಯಕ್ಷೇತ್ರವೆಂದು ಘೋಷಿಸಬೇಕು. ಅಲ್ಲಿರುವ ಗೋರಿಗಳನ್ನು ನಾಗೇನಹಳ್ಳಿಯಲ್ಲಿರುವ ಮೂಲ ಬಾಬಾಬುಡನ್ ದರ್ಗಾಕ್ಕೆ ಸ್ಥಳಾಂತರಿಸಬೇಕು. ದತ್ತಪೀಠದಲ್ಲಿದ್ದ ಅಮೂಲ್ಯ ವಿಗ್ರಹಗಳಲ್ಲಿ ಕೆಲವು ಕಾಣೆಯಾಗಿವೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಅಲ್ಲಿನ ಕೆಲವೊಂದು ಮೂರ್ತಿಗಳು ಹಾಗೂ ಸ್ವತ್ತುಗಳು ಸರ್ಕಾರದ ಸುಪರ್ದಿಯಲ್ಲಿದ್ದು, ಅವೆಲ್ಲವನ್ನೂ ಹಿಂದೂಗಳಿಗೆ ಮರಳಿಸಬೇಕು’ ಎಂದು ಒತ್ತಾಯಿಸಿದರು.
ವಿಶ್ವ ಹಿಂದೂ ಪರಿಷತ್ನ ವಿಭಾಗ ಸಂಯೋಜಕ ಪುನೀತ್ ಅತ್ತಾವರ್, ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ, ಪುತ್ತೂರು ಜಿಲ್ಲಾ ಸಂಯೋಜಕ್ ಭರತ್ ಕುಮುಡೇಲು ಹಾಗೂ ಉಡುಪಿ ಜಿಲ್ಲಾ ಸಂಯೋಜಕ್ ಚೇತನ್ ಪೇರಲ್ಕೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.