ವಿಟ್ಲ: ಅಪಘಾತ ವಿಚಾರದಲ್ಲಿ ಕಿರುತೆರೆ ನಟಿಯೊಬ್ಬರು ರಸ್ತೆಯಲ್ಲಿ ಗಲಾಟೆ, ರಂಪಾಟ ನಡೆಸಿದ ಘಟನೆ ವಿಟ್ಲದ ಪೆರುವಾಯಿ ಎಂಬಲ್ಲಿ ಸಂಭವಿಸಿದ್ದು, ಗಲಾಟೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಟ್ಲ ಸಮೀಪದ ಮಾಣಿಲ ನಿವಾಸಿ, ಕಿರುತೆರೆ ನಟಿ ಶೋಭಾ ಯಾನೆ ಶೋಭಿತಾ ಎಂಬುವವರು ‘ಸ್ನೇಹಿತನ ಜತೆಯಾಗಿ ಮಾಣಿಲ ಕಡೆಗೆ ಐ20 ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಇನ್ನೊಂದು ಕುಟುಂಬ ಪುಣಚ ಕಡೆಗೆ ಬೆಲೇನೊ ಕಾರಿನಲ್ಲಿತೆರಳುತ್ತಿದ್ದು, ದಾರಿ ಬಿಡಲು ನಟಿ ಸಂಚರಿಸುತ್ತಿದ್ದ ಕಾರು ರಸ್ತೆಯಿಂದ ಕೆಳಕ್ಕೆ ಇಳಿಸುತ್ತಿದ್ದ ವೇಳೆ ಹಾನಿಗೊಂಡಿದೆ’ ಎಂದು ನಟಿ ಆರೋಪಿಸಿದ್ದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಜಮಾಯಿಸಿದ್ದರು. ಬಳಿಕ ಸ್ಥಳೀಯರು ಎರಡು ವಾಹನಗಳ ಪ್ರಯಾಣಿಕರ ನಡುವೆ ರಾಜಿ ಮಾತುಕತೆ ಮಾಡಿ ಪ್ರಕರಣ ಮುಗಿಸಲು ಯತ್ನಿಸಿದ್ದರೂ ಸ್ಥಳೀಯರಿಗೆ ಹಾಗೂ ನಟಿ ಮತ್ತು ಆಕೆಯ ಸ್ನೇಹಿತನ ನಡುವೆ ವಾಗ್ವಾದ, ನೂಕಾಟ ತಳ್ಳಾಟ ನಡೆದಿದೆ. ಗಲಾಟೆ ವಿಚಿತ್ರ ಸ್ವರೂಪ ಪಡೆಯುತ್ತಿದ್ದಂತೆ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಇತ್ತಂಡದವರನ್ನು ಠಾಣೆಗೆ ಕರೆಯಿಸಿ ರಾಜಿ ಮಾತುಕತೆ ಮೂಲಕ ಬಗೆಹರಿಸಿದ್ದರು. ಈ ಬಗ್ಗೆ ಯಾವುದೇ ಪ್ರಕರಣ ಬೇಡವೆಂದು ನಟಿ ಬರೆದುಕೊಟ್ಟಿದ್ದರಿಂದ ಪ್ರಕರಣ ಸುಖಾಂತ್ಯಗೊಂಡಿತ್ತು.
ಇದೀಗ ಕೆಲವು ದಿನಗಳ ಬಳಿಕ ಗಲಾಟೆ ದೃಶ್ಯಗಳ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸರು ಮತ್ತೆ ಎರಡು ತಂಡಗಳನ್ನು ಠಾಣೆಗೆ ಕರೆಯಿಸಿ ಪ್ರಕರಣವನ್ನು ಕೊನೆಗೊಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.