ADVERTISEMENT

ಮಂಗಳೂರು: ಅಯೋಧ್ಯೆಯಿಂದ ವಾಪಸಾದ ಪೇಜಾವರ ಶ್ರೀಗಳಿಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 2:15 IST
Last Updated 18 ಮಾರ್ಚ್ 2024, 2:15 IST
ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಲಾಯಿತು
ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಲಾಯಿತು   

ಮಂಗಳೂರು: ಅಯೋಧ್ಯೆಯಲ್ಲಿ 48 ದಿನಗಳ ಮಂಡಲೋತ್ಸವ ಪೂರ್ಣಗೊಳಿಸಿ ಮರಳಿದ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ವಿಮಾನ ನಿಲ್ದಾಣದಲ್ಲಿ ಭಕ್ತಿಪೂರ್ವಕ ಸ್ವಾಗತ ಕೋರಲಾಯಿತು. ಉಡುಪಿಯಲ್ಲಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.

ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ವತಿಯಿಂದ ವಿಮಾನನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಮತ್ತಿತರರು ಸ್ವಾಗತ ಕೋರಿದರು.

ಮಹಾನಗರ ಪಾಲಿಕೆ ಸದಸ್ಯೆ ಪೂರ್ಣಿಮಾ, ಮುಖಂಡರಾದ ರಮೇಶ್ ಕಂಡೆಟ್ಟು, ವಿಜಯ್ ಕುಮಾರ್ ಶೆಟ್ಟಿ, ಮನೋಹರ್ ಕದ್ರಿ, ನಂದನ್ ಮಲ್ಯ, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಪೂರ್ಣಿಮಾ ರಾವ್, ನೀಲೇಶ್ ಕಾಮತ್, ವಿನೋದ್ ಮೆಂಡನ್, ಮೋಹನ್ ಪೂಜಾರಿ, ರಾಜೇಂದ್ರ, ಪ್ರಕಾಶ್, ರಾಹುಲ್, ರಾಮ್ ಪ್ರಸಾದ್, ಪ್ರಶಾಂತ ಮರೋಳಿ, ವಿಶ್ವ ಹಿಂದೂ ಪರಿಷತ್‌ನ ಎಂ.ಬಿ ಪುರಾಣಿಕ್, ಸುಧಾಕರ ಪೇಜಾವರ ಇದ್ದರು.

ADVERTISEMENT

ಪಡುಬಿದ್ರಿಯ ಹೆಜಮಾಡಿಯಲ್ಲಿ ವಿಶ್ವಹಿಂದೂ ಪರಿಷತ್, ಹಿಂದೂ ಸಂಘಟನೆಗಳು, ಶಾಸಕರ ನೇತೃತ್ವದಲ್ಲಿ ಆರತಿ ಬೆಳಗಿ ಶ್ರೀಗಳನ್ನು  ಸ್ವಾಗತಿಸಲಾಯಿತು. ನಂತರ ಮೆರವಣಿಗೆಯಲ್ಲಿ ಕಾರು, ದ್ವಿಚಕ್ರ ವಾಹನಗಳೊಂದಿಗೆ ಮೆರವಣಿಗೆಯಲ್ಲಿ ಕಾಪುವಿನತ್ತ ಕರೆದುಕೊಂಡು ಹೋಗಲಾಯಿತು. 

ಉಡುಪಿಯಲ್ಲಿ ಭಕ್ತರು ಹಾಗೂ ಸಂಘ ಸಂಸ್ಥೆಗಳ ವತಿಯಿಂದ ಸ್ವಾಗತ ಕೋರಲಾಯಿತು. ರಥದಲ್ಲಿ ಕೃಷ್ಣಮಠಕ್ಕೆ ಕರೆತರುವಾಗ ವಾದ್ಯಮೇಳ, ಚೆಂಡೆ ವಾದನ, ಭಜನೆ ಇತ್ಯಾದಿಗಳ ಹಿನ್ನೆಲೆ ಇತ್ತು. ಸಂಸ್ಕೃತ ಕಾಲೇಜಿನಿಂದ ಕಾಲ್ನಡಿಗೆಯಲ್ಲಿ ರಥಬೀದಿಗೆ ತಲುಪಿದ ಶ್ರೀಗಳು ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರನ ದರ್ಶನ ಪಡೆದು ಕೃಷ್ಣಮಠದಲ್ಲಿ ದೇವರ ದರ್ಶನ ಪಡೆದರು. ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಗಳು ಶಾಲು ಹೊದಿಸಿ, ಹೂಮಾಲೆ ಹಾಕಿ ಕಿರೀಟ ತೊಡಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಶಾಸಕ ಕೆ.ರಘುಪತಿ ಭಟ್‌, ಮಠದ ದಿವಾನ ಪ್ರಸನ್ನ ಆಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.