ಮಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆ್ಯಂಟನಿ ವೇಸ್ಟ್ ಮ್ಯಾನೇಜ್ಮೆಂಟ್ನ ನೌಕರರು ಶನಿವಾರ ದಿಢೀರ್ ಮುಷ್ಕರ ನಡೆಸಿದ್ದು, ಮನೆಗಳಿಂದ ಕಸ ಸಂಗ್ರಹಣೆ ಸ್ಥಗಿತವಾಗಿತ್ತು. 15 ದಿನಗಳಲ್ಲಿ ಎರಡನೇ ಬಾರಿಗೆ ನೌಕರರು ಮುಷ್ಕರ ನಡೆಸಿದ್ದರಿಂದ ಜನರು ತೊಂದರೆ ಅನುಭವಿಸುವಂತಾಯಿತು.
ಪ್ರತಿ ತಿಂಗಳು 10 ನೇ ತಾರೀಖಿನ ಒಳಗೆ ತಿಂಗಳ ಸಂಬಳ ನೀಡಬೇಕು. ಕೆಲಸದ ಅವಧಿ ಒಟ್ಟಾರೆ 8 ಗಂಟೆ ಆಗಬೇಕು. ಹೆಚ್ಚುವರಿ ಕೆಲಸಕ್ಕೆ ಸರ್ಕಾರ ನಿಯಮದ ಪ್ರಕಾರ ಹೆಚ್ಚಿನ ವೇತನ ನೀಡಬೇಕು. ದಬ್ಬಾಳಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಭವಿಷ್ಯ ನಿಧಿ, ಇಎಸ್ಐ ಸೇರಿದಂತೆ ಸಾಮಾಜಿಕ ಭದ್ರತೆ ಯೋಜನೆಗಳನ್ನು ಜಾರಿಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಲಾಯಿತು.
‘ತಮ್ಮ ನೌಕರರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಆ್ಯಂಟನಿ ವೇಸ್ಟ್ ಮ್ಯಾನೇಜ್ಮೆಂಟ್ಗೆ ಸೂಚನೆ ನೀಡಲಾಗಿದೆ. ಶನಿವಾರವೂ ನೌಕರರು ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಆ್ಯಂಟನಿ ವೇಸ್ಟ್ನ ಪ್ರತಿನಿಧಿಗಳು ಹಾಗೂ ನೌಕರರ ಜೊತೆಗೆ ಚರ್ಚಿಸಲಾಗಿದೆ. ಒಪ್ಪಂದದಂತೆ ವೇತನ ಪಾವತಿಸಲು ಸೂಚನೆ ನೀಡಲಾಗಿದೆ’ ಎಂದು ಪಾಲಿಕೆ ಉಪ ಆಯುಕ್ತ ಡಾ.ಸಂತೋಷ್ಕುಮಾರ್ ಹೇಳಿದರು.
‘ಕಳೆದ ಬಾರಿ ನೌಕರರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಬೋನಸ್ ಹಾಗೂ ವೇತನ ಪಾವತಿಸುವಂತೆ ಒತ್ತಾಯಿಸಿದ್ದರು. ಇದೀಗ ಎರಡು ದಿನದಲ್ಲಿ ಬೋನಸ್ ಪಾವತಿಸುವುದಾಗಿ ಆ್ಯಂಟನಿ ವೇಸ್ಟ್ನ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ. ಅದರಂತೆ ಕಸ ಸಂಗ್ರಹಣೆ ಆರಂಭಿಸಲಾಗಿದೆ. 13 ವಾರ್ಡ್ಗಳಲ್ಲಿ ಪಾಲಿಕೆಯ ಪೌರ ಕಾರ್ಮಿಕರು ಕಸ ಸಂಗ್ರಹಣೆ ಮಾಡಿದ್ದಾರೆ. ಉಳಿದ ವಾರ್ಡ್ಗಳಲ್ಲಿ ಆ್ಯಂಟನಿ ವೇಸ್ಟ್ನಿಂದ ಕಸ ಸಂಗ್ರಹಣ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ಭಾನುವಾರವೂ ಕಸ ಸಂಗ್ರಹಿಸಲ್ಲ:ಆ್ಯಂಟನಿ ವೇಸ್ಟ್ ಮ್ಯಾನೇಜ್ಮೆಂಟ್ನ ನೌಕರರು ಭಾನುವಾರವೂ ಕಸ ಸಂಗ್ರಹಣೆ ಮಾಡದಿರಲು ನಿರ್ಧರಿಸಿದ್ದಾರೆ.
ಡಿಸೆಂಬರ್ 17 ರಂದು ಕಂಪನಿಯು ವೇತನ, ಬೋನಸ್ ನೀಡುವುದು, ಸಾಮಾಜಿಕ ಭದ್ರತಾ ಯೋಜನೆಗಳನ್ನು ಮುಂದುವರಿಸಲು ಒಪ್ಪಿಗೆ ನೀಡಿತ್ತು. ಆದರೆ, ಒಂದು ಬೇಡಿಕೆಗೆ ಮಾತ್ರ ಒಪ್ಪಿಕೊಂಡಿದ್ದು, ಉಳಿದ ಬೇಡಿಕೆಗಳು ಹಾಗೆಯೇ ಉಳಿದಿವೆ. ಹಾಗಾಗಿ ಭಾನುವಾರವೂ ಕೆಲಸದಿಂದ ದೂರ ಉಳಿಯಲು ನಿರ್ಧರಿಸಿದ್ದೇವೆ ಎಂದು ನೌಕರರ ಪ್ರತಿನಿಧಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.