
ಕೊಯಿಲ(ಉಪ್ಪಿನಂಗಡಿ): ಕಡಬ ತಾಲ್ಲೂಕು ಕೊಯಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಯಿಲ ಜನತಾ ಕಾಲೊನಿಯಲ್ಲಿ ಶಿಥಿಲಗೊಂಡ ಕುಡಿಯುವ ನೀರು ಸರಬರಾಜು ಯೋಜನೆಯ ಬೃಹತ್ ಟ್ಯಾಂಕ್ ಕುಸಿಯುವ ಹಂತಕ್ಕೆ ತಲುಪಿದ್ದು, ಇಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ.
ಕಾಲೊನಿಯಲ್ಲಿ 1996ರಲ್ಲಿ ವಿಶ್ವ ಬ್ಯಾಂಕ್ ಕುಡಿಯುವ ನೀರು ಯೋಜನೆಯಡಿ ಟ್ಯಾಂಕ್ ನಿರ್ಮಿಸಲಾಗಿದೆ. ಬೃಹತ್ ಟ್ಯಾಂಕ್ ಬುಡದಲ್ಲೇ 15 ಅಡಿ ಎತ್ತರದಲ್ಲಿರುವ ಧರೆ ಕುಸಿತವಾಗಿದೆ. ನಿರಂತರ ಮಳೆಗೆ ಮಣ್ಣು ಸಡಿಲವಾಗಿ ಧರೆ ಮತ್ತಷ್ಟು ಕುಸಿಯುತ್ತಲೇ ಇದೆ. ಯಾವ ಕ್ಷಣದಲ್ಲಿ ಗುಡ್ಡ ಕುಸಿಯುವ ಹಂತದಲ್ಲಿದ್ದು, ಟ್ಯಾಂಕ್ ಸಮೀಪದಲ್ಲಿ 10ಕ್ಕೂ ಅಧಿಕ ಮನೆಗಳಿದ್ದು, ಟ್ಯಾಂಕ್ ಕುಸಿದರೆ ಇಲ್ಲಿನ ಮನೆಗಳೂ ನೆಲಸಮವಾಗುವ ಸಾಧ್ಯತೆಯ ಬಗ್ಗೆ ಸ್ಥಳೀಯ ನಿವಾಸಿಗಳು ಭೀತಿ ವ್ಯಕ್ತಪಡಿಸಿದ್ದಾರೆ.
ನಿವಾಸಿಗಳಿಗೆ ಪಂಚಾಯಿತಿ ನೋಟಿಸ್:
ಟ್ಯಾಂಕ್ ಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ಟ್ಯಾಂಕ್ ಸಮೀಪದ 6 ಮನೆಯ ಜನರನ್ನು ಮನೆ ಖಾಲಿ ಮಾಡುವಂತೆ ಕೊಯಿಲ ಗ್ರಾಮ ಪಂಚಾಯಿತಿ ತಿಂಗಳ ಹಿಂದೆ ನೋಟಿಸ್ ನೀಡಿದೆ. ಇದಕ್ಕೆ ಸಮ್ಮತಿಸದ ಮನೆಯವರು ಮನೆಯಲ್ಲಿ ಹಾಲು ಕರೆಯುವ ದನ-ಕರು ಇದೆ. ಅವನ್ನು ಎಲ್ಲಿ ಕರೆದೊಯ್ಯಬೇಕು. ಬಹುತೇಕ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದು, ಅವರನ್ನೆಲ್ಲ ಕರೆದುಕೊಂಡು ನಾವು ಎಲ್ಲಿಗೆ ಹೋಗಬೇಕು" ಎಂದು ಪ್ರಶ್ನಿಸಿದ್ದಾರೆ. ಟ್ಯಾಂಕ್ ನೆಲಸಮ ಮಾಡಿ, ಆ ವೇಳೆ ನಾವು ನೆಂಟರ ಮನೆಯಲ್ಲಿ ಒಂದಷ್ಟು ದಿನ ಉಳಿದು ಬರುತ್ತೇವೆ. ಆದರೆ ಪೂರ್ಣ ಪ್ರಮಾಣದಲ್ಲಿ ಮನೆ ಖಾಲಿ ಮಾಡಿ ಹೋಗಲು ಸಾಧ್ಯವಿಲ್ಲ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುಂದೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಟೆಂಡರ್ ಆಗಿತ್ತು: ಟ್ಯಾಂಕ್ ತೆರವು ಮಾಡುವ ಸಲುವಾಗಿ ಪಂಚಾಯಿತಿ ಟೆಂಡರ್ ಕರೆದಿತ್ತು. ಯಾರೂ ಬಿಡ್ ಹಾಕಿರಲಿಲ್ಲ. ಈ ಬಗ್ಗೆ ತಾಲ್ಲೂಕು ಪಂಚಾಯಿತಿಗೆ ತಿಳಿಸಲಾಗಿದೆ. ಅಲ್ಲಿಂದ ಆದೇಶ ಆದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್ ತಿಳಿಸಿದ್ದಾರೆ.
‘ಒಂದು ವಾರದ ಒಳಗಾಗಿ ಟ್ಯಾಂಕ್ ನೆಲಸಮ ಮಾಡದಿದ್ದರೆ ಗ್ರಾಮಸ್ಥರ ನೇತೃತ್ವದಲ್ಲಿ ಪಂಚಾಯಿತಿ ಮುಂದೆ ಧರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಸಾಮಾಜಿಕ ಕಾರ್ಯಕರ್ತೆ ಸಲೀಕ ರೆಹಮಾನ್ ಕೆಮ್ಮಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.