ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಮತ್ತು ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ ಆಯ್ಕೆಯಾಗಲು, ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆ, ಸ್ಥಾನ ಪಡೆಯಲು ಪಕ್ಷದ ಕಾರ್ಯಕರ್ತರ ಶ್ರಮವೇ ಕಾರಣ. ಇದನ್ನು ಮರೆಯದೆ ಅವರಿಗೆ ಸ್ಪಂದಿಸಬೇಕು ಎಂದು ಶಾಸಕ ಅಶೋಕ್ಕುಮಾರ್ ರೈ ಹೇಳಿದರು.
ಪುತ್ತೂರು ತಾಲ್ಲೂಕಿನ ನರಿಮೊಗರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ನರಿಮೊಗರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ- ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪುತ್ತೂರಿನಲ್ಲಿ ಹಿಂದೆಂದೂ ಆಗದ ಕಾಮಗಾರಿಗಳು ನಡೆಯುತ್ತಿದ್ದು, ಬೃಹತ್ ಯೋಜನೆಗಳು ಕ್ಷೇತ್ರಕ್ಕೆ ಬಂದಿವೆ. ಇವೆಲ್ಲವನ್ನೂ ಜನರಿಗೆ ತಿಳಿಸಬೇಕು ಎಂದು ಅವರು ಕಾರ್ಯಕರ್ತರಿಗೆ ತಿಳಿಸಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕಾಂಗ್ರೆಸ್ ಮುಖಂಡ ಬಾಬು ಶೆಟ್ಟಿ, ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ ಮಾತನಾಡಿದರು.
ಪ್ರಮುಖರಾದ ರವಿಪ್ರಸಾದ್ ಶೆಟ್ಟಿ, ಪೂರ್ಣೇಶ್ ಭಂಡಾರಿ, ವೇದನಾಥ ಸುವರ್ಣ ನರಿಮೊಗರು, ರವೀಂದ್ರ ರೈ ನೆಕ್ಕಿಲು, ವಿಶಾಲಾಕ್ಷಿ ಬನ್ನೂರು, ಸುಪ್ರೀತ್ ಕಣ್ಣಾರಾಯ, ಪರಮೇಶ್ವರ್ ಭಂಡಾರಿ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಹರಿಣಾಕ್ಷಿ ಬೊಳ್ಳಡ್ಕ, ಇಲಿಯಾಸ್ ಮುಕ್ವೆ, ಸುಮಾ ಶಿವರಾಮ್ ಪಜಿರೋಡಿ ಭಾಗವಹಿಸಿದ್ದರು.
ಅಝೀಝ್ ನೆರಿಗೇರಿ ವಂದಿಸಿದರು. ರಫೀಕ್ ಮಣಿಯ ಕಾರ್ಯಕ್ರಮ ನಿರೂಪಿಸಿದರು.
ಪುತ್ತೂರಿಗೆ ಮೆಡಿಕಲ್ ಕಾಲೇಜು ಮಂಜೂರುಗೊಳಿಸಲು, ಮುಂಡೂರು ಗ್ರಾಮದಲ್ಲಿ ತಾಲ್ಲೂಕು ಕ್ರೀಡಾಂಗಣ, ಆರ್ಟಿಒ ಕೇಂದ್ರ ಮಂಜೂರು ಮಾಡಿಸಿದ ಅಶೋಕ್ಕುಮಾರ್ ರೈ ಅವರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.