ಮೂಡುಬಿದಿರೆಯ ಗಾಂಧಿನಗರದಲ್ಲಿ ಹೋಟೆಲ್ ತ್ಯಾಜ್ಯದಿಂದ ಬಾವಿ ನೀರು ಕಲುಷಿತಗೊಂಡಿರುವುದು
ಮೂಡುಬಿದಿರೆ: ವಿದ್ಯಾಗಿರಿಯ ಹೊಟೇಲೊಂದರ ತ್ಯಾಜ್ಯ ಹರಿದು ಹತ್ತಿರದ ಬಾವಿಯ ನೀರು ಕಲುಷಿತಗೊಂಡಿದೆ ಎಂದು ಸ್ಥಳೀಯರು ಪುರಸಭೆಗೆ ದೂರು ನೀಡಿದ್ದಾರೆ. ಪರಿಹಾರಕ್ಕೆ ಹೋಟೆಲ್ನವರು ಕಾಲಾವಕಾಶ ಕೋರಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಇಂದು ಎಂ ತಿಳಿಸಿದ್ದಾರೆ.
ಗಾಂಧಿನಗರದ ಅನ್ನು ಎಂಬವರ ಮನೆಯ ಬಾವಿ ನೀರು ಹಾಳಾಗಿದೆ. ನಾಲ್ಕು ವರ್ಷಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ತ್ಯಾಜ್ಯದಿಂದಾಗಿ ನೀರಿನ ಬಣ್ಣ ಬದಲಾಗಿದ್ದು ಕೆಟ್ಟ ವಾಸನೆ ಬರುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಾವಿಯ ನೀರನ್ನು ಐದು ಕುಟುಂಬಗಳು ಬಳಸುತ್ತಿದ್ದರು. ಈಗ ಕುಡಿಯುವುದಕ್ಕೆ ಮಾತ್ರವಲ್ಲ, ಪಾತ್ರೆ ತೊಳೆಯುವುದಕ್ಕೂ ಬಳಸಲಾಗದ ಪರಿಸ್ಥಿತಿ ನಿರ್ಮಾಣ ಆಗಿದೆ.
ಪುರಸಭೆಯ ನೀರು ಎರಡು ದಿನಗಳಿಗೊಮ್ಮೆ ಮಾತ್ರ ಬರುತ್ತದೆ. ಆದ್ದರಿಂದ ಪ್ರತಿದಿನ ಹಣ ಕೊಟ್ಟು ಟ್ಯಾಂಕರ್ ನೀರು ತರಿಸುತ್ತಿದ್ದೇವೆ. ಮನೆಯಲ್ಲಿ ಅಂಗವಿಕಲ ಹುಡುಗನಿದ್ದು ಆತನ ಅಗತ್ಯಗಳಿಗೆ ಹೆಚ್ಚು ನೀರಿನ ಅವಶ್ಯಕತೆ ಇದೆ. ದೈವಸ್ಥಾನಕ್ಕೂ ನಿತ್ಯ ನೀರಿನ ಅವಶ್ಯಕತೆ ಇದೆ ಎಂದು ಮೋಹನ್ ತಿಳಿಸಿದ್ದಾರೆ.
ಕಲುಷಿತಗೊಂಡ ಬಾವಿಯ ನೀರನ್ನು ಶುದ್ಧೀಕರಿಸಬೇಕು ಹಾಗೂ ಹೋಟೆಲ್ನ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.
ಸಮಸ್ಯೆ ಇದೆ ಎಂದು ಸ್ಥಳೀಯರಾದ ನಾರಾಯಣ ಮತ್ತು ಅನ್ನು ಅವರು ದೂರು ನೀಡಿದ್ದು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಹೋಟೆಲ್ ತ್ಯಾಜ್ಯ ನೀರಿನ ಒರತೆಯ ಜೊತೆ ಸೇರಿರುವುದರಿಂದ ಬಾವಿ ಕಲುಷಿತಗೊಂಡಿರುವುದನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಕ್ರಮ ವಹಿಸುವಂತೆ ನೋಟೀಸ್ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.