ADVERTISEMENT

ಕಾಡುಪ್ರಾಣಿಗಳಿಗೂ ಧಗೆ..! ರಕ್ಷಿತಾರಣ್ಯಗಳಲ್ಲಿ ಹೊಸ ಕೆರೆ, ನೀರಿನ ಹೊಂಡ ನಿರ್ಮಾಣ

ಪ್ರವೀಣ್‌ ಕುಮಾರ್‌ ಪಿ.ವಿ
Published 8 ಮಾರ್ಚ್ 2025, 23:40 IST
Last Updated 8 ಮಾರ್ಚ್ 2025, 23:40 IST
   

ಮಂಗಳೂರು: ಈ ವರ್ಷ ಫೆಬ್ರುವರಿ ತಿಂಗಳಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಕಾಡಿನೊಳಗಿನ ನದಿ– ತೊರೆಗಳು ಬತ್ತಿವೆ. ಹೆಚ್ಚುತ್ತಿರುವ ಉಷ್ಣಾಂಶ, ಇನ್ನೊಂದೆಡೆ ನೀರಿನ ಕೊರತೆ ಕಾಡುಪ್ರಾಣಿಗಳನ್ನೂ ಬಸವಳಿಯುವಂತೆ ಮಾಡಿದೆ.

‘ವಾತಾವರಣದ ಉಷ್ಣಾಂಶ ಏಕಾಏಕಿ ಎರಡರಿಂದ ಮೂರು ಡಿಗ್ರಿಗಳಷ್ಟು ಹೆಚ್ಚಾದಾಗ ಪಶು–ಪಕ್ಷಿಗಳು ನಿರ್ಜಲೀಕರಣದ ಸಮಸ್ಯೆ ಎದುರಿಸುತ್ತವೆ. ಬಿಸಿಲಿನ ತಾಪದಿಂದ ಆಘಾತಕ್ಕೆ ಒಳಗಾದ 12
ಪಕ್ಷಿಗಳಿಗೆ ಈಚೆಗೆ ಚಿಕಿತ್ಸೆ ನೀಡಿದ್ದೇವೆ. ಇಷ್ಟು ವರ್ಷ ಬೇಸಿಗೆ ತೀವ್ರವಾಗುವ ಮುನ್ನವೇ ಇಷ್ಟೊಂದು ಸಂಖ್ಯೆಯಲ್ಲಿ ಪಕ್ಷಿಗಳು ಸಮಸ್ಯೆ ಎದುರಿಸಿದ್ದಿಲ್ಲ. ಕಾಡಿನಲ್ಲಿ ಎಲ್ಲೂ ನೀರು ಸಿಗದಿದ್ದರೆ ಕಾಡುಪ್ರಾಣಿಗಳಿಗೂ ಖಂಡಿತಾ ಸಮಸ್ಯೆ ಆಗುತ್ತದೆ’ ಎನ್ನುತ್ತಾರೆ ವನ್ಯಜೀವಿ ವೈದ್ಯೆ ಡಾ.ಮೇಘನಾ.

‘ಕಳೆದ ಬೇಸಿಗೆಯಲ್ಲಿ ಕಾಡುಪ್ರಾಣಿ ಗಳು ತೀವ್ರ ನೀರಿನ ಅಭಾವ ಎದುರಿಸಿ ದ್ದರಿಂದ ಮುನ್ನೆಚ್ಚರಿಕೆ ವಹಿಸಿದ್ದೇವೆ. ರಕ್ಷಿತಾರಣ್ಯಗಳಲ್ಲಿ ಕೆರೆ, ನೀರಿನ ಹೊಂಡಗಳನ್ನು ನಿರ್ಮಿಸಿ, ತೊರೆಗಳ ನೀರನ್ನೇ ಸಂಗ್ರಹಿಸಿ ಬೇಸಿಗೆಯಲ್ಲೂ ಲಭಿಸುವಂತೆ ಮಾಡಿದ್ದೇವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟೊನಿ ಮರಿಯಪ್ಪ ತಿಳಿಸಿದರು. 

ADVERTISEMENT

‘ಪಶ್ಚಿಮ ಘಟ್ಟ ತಪ್ಪಲಿನ ಬಸಳೆ, ನೆಲ್ಲಿಕುಮೇರಿ, ಕನ್ನಡಿತೋಡು, ನೆಕ್ಕರೆ ಗಳಲ್ಲಿ ರಕ್ಷಿತಾರಣ್ಯಗಳಲ್ಲಿ ಕೆರೆಗಳನ್ನು ನಿರ್ಮಿಸಿದ್ದೆವು. ನೆಲ್ಲಿಕುಮೇರಿಯಲ್ಲಿ ಆನೆಗಳ ಹಿಂಡು ಕೆರೆಯ ಬಳಿ ಕಾಣಿಸಿಕೊಂಡಿದೆ. ಮಳೆಯಾದರೆ ನೀರಿನ ಅಭಾವ ನೀಗಬಹುದು’ ಎಂದು ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್‌ ಶೆಟ್ಟಿ ತಿಳಿಸಿದರು.

‘ಪಶ್ಚಿಮ ಘಟ್ಟದ ತೊರೆಗಳಲ್ಲೂ ನೀರಿಲ್ಲ’

‘ಪಶ್ಚಿಮ ಘಟ್ಟದಲ್ಲಿ ಹಾಗೂ ಅದರ ತಪ್ಪಲ ಪ್ರದೇಶದ ನದಿ ತೊರೆಗಳಲ್ಲಿ ಈ ಸಲ ನೀರಿನ ಅಭಾವ ಕಾಣಿಸಿಕೊಳ್ಳುವ ಲಕ್ಷಣಗಳಿವೆ. ಡಿಸೆಂಬರ್‌ವರೆಗೂ ಚೆನ್ನಾಗಿ ಮಳೆಯಾಗಿದ್ದರಿಂದ ಘಟ್ಟ ಪ್ರದೇಶದ ನದಿ ತೊರೆಗಳಲ್ಲಿ ಮಾರ್ಚ್‌ ಅಂತ್ಯದವರೆಗೂ ನೀರಿರಬಹುದು ಎಂದು ನಿರೀಕ್ಷಿಸಿದ್ದೆವು. ಆದರೆ ಬಹುತೇಕ ತೊರೆಗಳು ಈಗಾಗಲೇ ಬತ್ತಿವೆ. ನದಿಗಳಲ್ಲಿ ನೀರಿನ ಹರಿವು ತುಂಬಾ ಕ್ಷೀಣಿಸಿದೆ’ ಎಂದು ಸುಬ್ರಹ್ಮಣ್ಯ ವಲಯ ಅರಣ್ಯ ಅಧಿಕಾರಿ ವಿಮಲ್‌ಬಾಬು ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.