ಮಂಗಳೂರು: ಜಿಲ್ಲೆಯ ಗ್ರಾಮೀಣ ಮಹಿಳೆಯರು ಕಾಡಿನಿಂದ ಸಂಗ್ರಹಿಸಿದ ತಂದು, ಮೌಲ್ಯವರ್ಧನೆ ಮಾಡಿರುವ ‘ವೈಲ್ಡ್ ಹನಿ’ ಆನ್ಲೈನ್ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆದಿದೆ, ಅಷ್ಟೇ ಅಲ್ಲ, ಅರಬ್ ರಾಷ್ಟ್ರಗಳ ಜೇನುಪ್ರಿಯರ ಮನ ಗೆದ್ದಿದೆ.
ಸುಳ್ಯ ತಾಲ್ಲೂಕಿನ ಆರಂತೋಡು ಗ್ರಾಮದ ವನ್ಧನ್ ವಿಕಾಸ ಕೇಂದ್ರದ ಮಹಿಳೆಯರು ಈ ‘ವೈಲ್ಡ್ ಹನಿ’ ತಯಾರಕರು. ಇತ್ತೀಚೆಗೆ ಮಂಗಳೂರಿನಲ್ಲಿ ಒಂದು ತಿಂಗಳು ನಡೆದ ಕರಾವಳಿ ಉತ್ಸವದ ವೀಕ್ಷಣೆಗೆ ಬಂದಿದ್ದ ಜನರು, ಕಾಡಿನ ಜೇನಿಗೆ ಮಾರು ಹೋಗಿ ಭರ್ಜರಿ ಖರೀದಿ ಮಾಡಿದ್ದಾರೆ. ಗ್ರಾಹಕರು ಜೇನಿನ ಸವಿ ಅನುಭವಿಸಿದರೆ, ಶ್ರಮವಹಿಸಿ ಕಾಡಿನಿಂದ ಜೇನುತುಪ್ಪ ಸಂಗ್ರಹಿಸಿ ತಂದು, ಅದನ್ನು ಮಾರಾಟ ಮಾಡಿರುವ ಮಹಿಳೆಯರು ಲಾಭ ಗಳಿಸಿದ ಖುಷಿಯಲ್ಲಿದ್ದಾರೆ.
ಕೇಂದ್ರ ಸರ್ಕಾರದ ಬುಡಕಟ್ಟು ಅಭಿವೃದ್ಧಿ ಸಚಿವಾಲಯದ ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ (ಎನ್ಆರ್ಎಲ್ಎಂ) ಅಡಿಯಲ್ಲಿ ಎರಡು ವರ್ಷಗಳ ಹಿಂದೆ ರಚನೆಯಾಗಿರುವ ಆರಂತೋಡಿನ ವನ್ಧನ್ ವಿಕಾಸ ಕೇಂದ್ರವು ‘ವೈಲ್ಡ್ ಹನಿ’ ಬ್ರ್ಯಾಂಡ್ನ ಜೇನುತುಪ್ಪ, ಜೆಲ್ ಕ್ಯಾಂಡಲ್, ಮುಂಡೇವು ಚಾಪೆ, ಆಭರಣ ಮೊದಲಾದ ಉತ್ಪನ್ನಗಳನ್ನು ತಯಾರಿಸುತ್ತಿದೆ.
‘ಕೇಂದ್ರದಲ್ಲಿ 300ಕ್ಕೂ ಹೆಚ್ಚು ಸದಸ್ಯರು ಇದ್ದು, 60 ಮಂದಿ ಸಕ್ರಿಯರಾಗಿದ್ದಾರೆ. ನಮ್ಮ ವನ್ಧನ್ ಕೇಂದ್ರ ತಯಾರಿಸುವ ಜೇನುತುಪ್ಪ ಹಾಗೂ ಮುಂಡೇವು ಚಾಪೆಗೆ ಬಹು ಬೇಡಿಕೆ ಇದೆ. ಈ ಉತ್ಪನ್ನಗಳು ಆನ್ಲೈನ್ ಮಾರುಕಟ್ಟೆ ಪ್ರವೇಶಿಸಿದ್ದು, ‘ಮೀಷೊ’ ಮಾರುಕಟ್ಟೆ ತಾಣದಲ್ಲಿ ಜೇನುತುಪ್ಪ, ಬಳೆಗಳು, ಬ್ಯಾಂಡ್ಗಳು ಉತ್ತಮವಾಗಿ ಮಾರಾಟವಾಗುತ್ತಿವೆ’ ಎನ್ನುತ್ತಾರೆ ಕೃಷಿಯೇತರ ವಿಭಾಗದ ಬ್ಲಾಕ್ ಮ್ಯಾನೇಜರ್ ಮೇರಿ ಎಸ್.
‘ಕುವೈಟ್, ದುಬೈನಲ್ಲಿರುವ ಗ್ರಾಹಕರು 10 ಕೆ.ಜಿ.ಗೂ ಅಧಿಕ ಜೇನುತುಪ್ಪ ಖರೀದಿಸಿದ್ದಾರೆ. ಕರಾವಳಿ ಉತ್ಸವದಲ್ಲಿ ಜೇನುತುಪ್ಪ ಮಾರಾಟದಿಂದ ಕೇಂದ್ರಕ್ಕೆ ₹1.34 ಲಕ್ಷ ಆದಾಯ ದೊರೆತಿದೆ. ಆನ್ಲೈನ್ನಲ್ಲಿ 12 ಕೆ.ಜಿ.ಗೂ ಹೆಚ್ಚು ಜೇನುತುಪ್ಪ ಮಾರಾಟವಾಗಿದೆ. ಕಾಡಿಗೆ ಹೋಗಿ ಜೇನುತುಪ್ಪ ಸಂಗ್ರಹಿಸುವ ಕಾರ್ಯಕ್ಕೆ ಮಹಿಳೆಯರಿಗೆ, ಪುರುಷರು ನೆರವಾಗುತ್ತಾರೆ. ಪ್ಯಾಕಿಂಗ್, ಲೇಬಲಿಂಗ್ ಎಲ್ಲವನ್ನೂ ಸ್ಥಳೀಯವಾಗಿಯೇ ಮಾಡುತ್ತೇವೆ. ಇನ್ನಷ್ಟು ಹೊಸ ಉತ್ಪನ್ನಗಳನ್ನು ಆನ್ಲೈನ್ ತಾಣಕ್ಕೆ ಪರಿಚಯಿಸಲು ಯೋಚಿಸಿದ್ದೇವೆ’ ಎಂದು ಅವರು ತಿಳಿಸಿದರು.
‘ತಂಡದಲ್ಲಿ ಸಕ್ರಿಯವಾಗಿರುವವರು ತಿಂಗಳಿಗೆ ಸರಾಸರಿ ₹15 ಸಾವಿರದಷ್ಟು ಆದಾಯ ಗಳಿಸುತ್ತಿದ್ದಾರೆ. ಆರಂತೋಡಿನಲ್ಲಿರುವ ವನ್ಧನ್ ವಿಕಾಸ ಕೇಂದ್ರದಲ್ಲೂ ಮಹಿಳೆಯರು ತಯಾರಿಸುವ ವಸ್ತುಗಳನ್ನು ಮಾರಾಟಕ್ಕಿಡಲಾಗಿದೆ’ ಎಂದು ಅವರು ವಿವರಿಸಿದರು.
‘ಕಿರು ಅರಣ್ಯ ಉತ್ಪನ್ನಗಳ ಮೌಲ್ಯವರ್ಧನೆ ಮೂಲಕ ಆದಾಯ ಗಳಿಸಿ, ಮಹಿಳೆಯರಲ್ಲಿ ಸ್ವಾವಲಂಬಿ ಕಲ್ಪನೆ ಮೂಡಿಸುವುದು ಯೋಜನೆಯ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಹಲವಾರು ವನ್ಧನ್ ಕೇಂದ್ರಗಳು ಯೋಜನೆಯ ಉದ್ದೇಶವನ್ನು ಸಾಕಾರಗೊಳಿಸಿವೆ’ ಎನ್ನುತ್ತಾರೆ ಎನ್ಆರ್ಎಲ್ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ಗೌಡ.
‘ಚಾಪೆ: ಆದಾಯದ ಮಾರ್ಗ’
‘ಮುಂಡೇವು ಚಾಪೆ ಹೆಣೆಯುವುದು ಪಾರಂಪರಿಕವಾಗಿ ಬಂದ ಕಸುಬು. ಮನೆಯಲ್ಲಿ ಚಾಪೆ ಹೆಣೆದು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದೆವು. ಈಗ ನಾವು ಸಿದ್ಧಪಡಿಸುವ ಚಾಪೆಗೆ ಮಾರುಕಟ್ಟೆ ಸಿಕ್ಕಿದ್ದು ಬೇಡಿಕೆ ಹೆಚ್ಚಾಗಿದೆ. ಮನೆಯಲ್ಲಿ ಕುಳಿತು ಆದಾಯಗಳಿಸುವ ಮಾರ್ಗ ದೊರೆತಿದೆ. ಕೂಲಿ ಕೆಲಸಕ್ಕೆ ಹೋಗುವವರು ಈಗ ಚಾಪೆ ಹೆಣಿಕೆಯನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ ಆರಂತೋಡಿನ ಭಾಗೀರಥಿ.
ಸಂಜೀವಿನಿ ಸದಸ್ಯರಾಗಲು ಅವಕಾಶ
ಗ್ರಾಮೀಣ ಪ್ರದೇಶದ ಎಲ್ಲ ಅರ್ಹ ಕುಟುಂಬಗಳನ್ನು ಸಂಜೀವಿನಿ ಎನ್ಆರ್ಎಲ್ಎಂ ಅಡಿಯಲ್ಲಿ ತರಲು ಆ ಮೂಲಕ ಗ್ರಾಮೀಣ ಜನರ ಆರ್ಥಿಕ ಸದೃಢತೆಗೆ ಸರ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಭಾಗವಾಗಿ ಸಾಮಾಜಿಕ ಕ್ರೋಡೀಕರಣ ಆಂದೋಲನವು ಫೆಬ್ರುವರಿ ಮೊದಲ ವಾರದಿಂದ ಆರಂಭವಾಗಿದ್ದು ಮಾರ್ಚ್ 8ರವರೆಗೆ ನಡೆಯಲಿದೆ. ಈವರೆಗೆ ಎನ್ಆರ್ಎಲ್ಎಂ ಅಡಿಯಲ್ಲಿ ಸೇರ್ಪಡೆಯಾಗದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಸಹ ಯೋಜನೆಯ ಒಳಗೆ ತರಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತಿದ್ದು ಬಂದ ಆದಾಯವನ್ನು ಬಂಡವಾಳವಾಗಿ ಪರಿವರ್ತಿಸಿ ಉದ್ಯಮ ರೂಪಿಸಿಕೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ.–ಡಾ. ಆನಂದ್ ಕೆ, ಜಿಲ್ಲಾ ಪಂಚಾಯಿತಿ ಸಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.