ADVERTISEMENT

ಕೋವಿಡ್‌: ಮಹಿಳೆ ಸಾವು– ಸಂಬಂಧಿಕರ ಪ್ರತಿಭಟನೆ

ವೈದ್ಯಕೀಯ ನಿರ್ಲಕ್ಷ್ಯ ಎನ್ನಲಾಗದು: ಡಿಎಚ್‌ಒ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 10 ಮೇ 2021, 3:58 IST
Last Updated 10 ಮೇ 2021, 3:58 IST

ಮಂಗಳೂರು: ಇಲ್ಲಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಮಹಿಳೆಯೊಬ್ಬರು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮಹಿಳೆಯ ಸಂಬಂಧಿಕರು ಆಸ್ಪತ್ರೆ ಎದುರು ಭಾನುವಾರ ರಾತ್ರಿ ಪ್ರತಿಭಟನೆ ನಡೆಸಿದರು.

ಬಂಟ್ವಾಳದ ಮಹಿಳೆ ಮೂರು ದಿನಗಳ ಹಿಂದೆ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಬೆಳಿಗ್ಗೆ ಮಹಿಳೆ ಸಂಬಂಧಿಕರ ಜತೆ ವಿಡಿಯೊ ಕಾಲ್ ಮೂಲಕ ಮಾತನಾಡಿದ್ದು, ‘ನನ್ನನ್ನು ಬೇರೆ ವಾರ್ಡ್‌ಗೆ ಶಿಪ್ಟ್ ಮಾಡುತ್ತಾರೆ’ ಎಂದು ಹೇಳಿದ್ದಾರೆ. ಸಂಜೆ ವೇಳೆ ಮಹಿಳೆ ಮೃತಪಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆಗೆ ಬಂದು, ಮಹಿಳೆ ಸಾವಿಗೆ ವೆನ್ಲಾಕ್ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಪ್ರತಿಭಟಿಸಿದರು.

ತನಿಖೆ ನಂತರ ಸ್ಪಷ್ಟ: ‘ಇದು ವೈದ್ಯಕೀಯ ನಿರ್ಲಕ್ಷ್ಯ ಎನ್ನಲಾಗದು. ರೋಗಿಯ ಕುಟುಂಬದವರು ಭಾವನಾತ್ಮಕವಾಗಿ ಆರೋಪ ಮಾಡಿರಬಹುದು. ಅಲ್ಲಿನ ವೈದ್ಯರ ಜೊತೆ ಚರ್ಚಿಸಿದ್ದೇನೆ. ವೈದ್ಯರ ನಿರ್ಲಕ್ಷ್ಯ ಎಂದು ಮೇಲ್ನೋಟಕ್ಕೆ ಅನ್ನಿಸಿಲ್ಲ. ಈ ಬಗ್ಗೆ ತನಿಖೆಯ ನಂತರ ಸ್ಪಷ್ಟ ವಿಷಯ ತಿಳಿಯಬಹುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ತಿಳಿಸಿದ್ದಾರೆ.

ADVERTISEMENT

‘ಬಂಟ್ವಾಳದ ಮಹಿಳೆ ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿದ್ದರು. ಭಾನುವಾರ ಅವರಿಗೆ ಹೆಚ್ಚುವರಿ ವೈದ್ಯಕೀಯ ವ್ಯವಸ್ಥೆ ಬೇಕಾಗಿದ್ದರಿಂದ, ಅವರ ಕುಟುಂಬದ ಅನುಮತಿ ಪಡೆದೇ, ವೆಂಟಿಲೇಟರ್‌ ಅಳವಡಿಲಾಗಿತ್ತು. ಎಲ್ಲರಿಗೂ ವೆಂಟಿಲೇಟರ್ ಅಗತ್ಯ ಇರುವುದಿಲ್ಲ. ಈ ಹಂತಕ್ಕೆ ಹೋದಾಗ ಅದರದ್ದೇ ಆದ ಅಪಾಯ ಇರುತ್ತದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಶಾಸಕ ಕಾಮತ್‌ ಭೇಟಿ: ವೆನ್ಲಾಕ್ ಆಸ್ಪತ್ರೆಗೆ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ, ವೈದ್ಯರು, ಅಧಿಕಾರಿಗಳು ಹಾಗೂ ಸಂಬಂಧಿಕರ ಜೊತೆ ಮಾತುಕತೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಸ್ಪತ್ರೆಯ ಅಧಿಕಾರಿಗಳು, ಪೊಲೀಸರು ಮತ್ತು ಮಹಿಳೆಯ ಸಂಬಂಧಿಕರ ಜತೆ ಮಾತುಕತೆ ನಡೆಸಿದ್ದೇನೆ. ನಿಮ್ಮ ನೋವು ನನಗೆ ಅರ್ಥವಾಗುತ್ತದೆ. ವೈದ್ಯರ ನಿರ್ಲಕ್ಷ್ಯದ ಬಗ್ಗೆ ಅನುಮಾನವಿದ್ದರೆ ದೂರು ನೀಡಬಹುದು. ನಿಮಗೆ ನಮ್ಮ ಕಡೆಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಹೇಳಿದರು.

ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ, ಪರಿಸ್ಥಿತಿ ನಿಯಂತ್ರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.