ಮಂಗಳೂರು:‘ಮಹಿಳೆ ಮನೆಯನ್ನು ಬೆಳಗುವ ಗೂಡುದೀಪ ಮಾತ್ರವಲ್ಲ, ಸಮಾಜವನ್ನು ಬೆಳಗುವ ದೀವಿಗೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಹೇಳಿದರು.
ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಮಹಿಳಾ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಟಿ.ವಿ. ಹಾಗೂ ಮೊಬೈಲ್ ಬದುಕನ್ನು ವ್ಯಾಪಿಸಿಕೊಂಡಿದ್ದು, ಮನೆಯಲ್ಲಿ ಪುಸ್ತಕಕ್ಕೆ ಜಾಗವೇ ಇಲ್ಲದಂತಾಗಿದೆ. ದುಃಖ ಮರೆಯಲು ಈಗಲೂ ಪುಸ್ತಕವೇ ಮದ್ದು. ಒಡೆದ ಮನಸ್ಸನ್ನು ಕೂಡಿಸುವ ಶಕ್ತಿ ಪುಸ್ತಕಗಳಿಗೆ ಇದೆ’ ಎಂದರು.
ಶಾಸಕ ವೇದವ್ಯಾಸ ಕಾಮತ್, ‘ಒತ್ತಡದಿಂದ ಕೂಡಿದ ದೈನಂದಿನ ಬದುಕಿನ ನಡುವೆಯೂ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ’ ಎಂದರು.
ಲೇಖಕಿ ಜಯಮ್ಮ ಚೆಟ್ಟಿಮಾಡ ಅವರಿಗೆ ‘ತೌಳವ ಸಿರಿ' ಪ್ರಶಸ್ತಿ ಪ್ರದಾನ ಮಾಡಲಾಯಿತು.
‘ಸ್ವಾತಂತ್ರ್ಯದ ಅಮೃತ ಮಹೋತ್ಸವ: ಮಹಿಳಾ ಸ್ಮೃತಿ-ವಿಸ್ಮೃತಿ' ಕುರಿತು ಡಾ.ಮಹೇಶ್ವರಿ ಯು., ಸಿಹಾನ್ ಬಿ.ಎಂ. ವಿಚಾರ ಮಂಡಿಸಿದರು.
ಕರ್ಣಾಟಕ ಬ್ಯಾಂಕ್ನ ಉಪ ಪ್ರಧಾನ ವ್ಯವಸ್ಥಾಪಕ ಸುಮನಾ ಘಾಟೆ, ಶ್ರೀಗುರು ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷೆ ಸುಮಲತಾ ಎನ್.ಸುವರ್ಣ, ಉದ್ಯಮಿ ಜಿತೇಂದ್ರ ಕುಮಾರ್ ಡಿ., ಸಂಘದ ಉಪಾಧ್ಯಕ್ಷೆ ವಿಜಯ ಲಕ್ಷ್ಮೀ ಬಿ.ಶೆಟ್ಟಿ, ಕಾರ್ಯದರ್ಶಿ ಸುಜಾತಾ ಕೊಡ್ಮಣ್, ಜತೆ ಕಾರ್ಯದರ್ಶಿ ಆಕೃತಿ ಐ.ಎಸ್.ಭಟ್, ಖಜಾಂಚಿ ಶರ್ಮಿಳಾ ಶೆಟ್ಟಿ ಇದ್ದರು.
ನ್ಯಾನೊ ಕಥಾಗೋಷ್ಠಿಯಲ್ಲಿ ಕಸ್ತೂರಿ ಪಂಜ, ನಳಿನಾಕ್ಷಿ ಉದಯರಾಜ್, ಕ್ಯಾಥರೀನ್ ರಾಡ್ರಿಗಸ್, ಜಯಶ್ರೀ ಕದ್ರಿ, ಇಂದಿರಾ ಹಾಲಂಬಿ, ಸುಶೀಲಾ ಆರ್.ರಾವ್, ಅರುಣಾ ನಾಗರಾಜ್, ಅನಿತಾ ಶೆಟ್ಟಿ ಮೂಡುಬಿದಿರೆ, ವಿದ್ಯಾಗಣೇಶ್, ಶ್ರೀಕಲಾ ಉಡುಪ, ಸೌಮ್ಯಾ ಕುಗ್ವೆ, ರಶ್ಮಿ ಅರಸ್, ಸ್ನೇಹಲತಾ ದಿವಾಕರ್, ಸುಮಂಗಳಾ ಕೃಷ್ಣಾಪುರ ಹಾಗೂ ಸುಕನ್ಯಾ ಭಟ್ ಭಾಗವಹಿಸಿದರು.
ಜಯಲಕ್ಷ್ಮೀ ಶಾಸ್ತ್ರಿ, ರತ್ನಾವತಿ ಬೈಕಾಡಿ, ಜಯಶ್ರೀ ಅರವಿಂದ್, ಆಕೃತಿ ಐ.ಎಸ್. ಭಟ್, ಪ್ರಮಿಳಾರಾಜ್ ಸುಳ್ಯ, ತೇಜಶ್ರೀ, ವನಜ ವಿಜಯ ಸೋಮೇಶ್ವರ, ರಾಧಾ ಮುರಳೀಧರ್ ಹಾಗೂ ಡಾ.ಶೋಭಾ ಸತೀಶ್ ಅವರು ‘ಭಾವಗಾನ ಯಾನ’ ನಡೆಸಿಕೊಟ್ಟರು.
ಅಧ್ಯಕ್ಷೆ ಡಾ. ಜ್ಯೋತಿ ಚೇಳ್ಯಾರು ಸ್ವಾಗತಿಸಿದರು. ಡಾ. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರೂಪಶ್ರೀ ನಾಗರಾಜ್ ಆಶಯಗೀತೆ ಹಾಡಿದರು.
ಸಂಘದ ಸದಸ್ಯೆಯರು ಪ್ರಹಸನವನ್ನು ಪ್ರಸ್ತುತಪಡಿಸಿದರು. ಪೂರ್ಣಿಮಾ ಸುರೇಶ್ ಅವರು ಸತ್ಯನಾಪುರದ ಸಿರಿ ಏಕವ್ಯಕ್ತಿ ರೂಪಕ ಪ್ರದರ್ಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.