ಮಂಗಳೂರು: 'ಯಕ್ಷಗಾನದ ಹೆಸರಿನಲ್ಲಿ ಕರಾವಳಿಯಲ್ಲಿ ಸಾಮಾಜಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕಾರ್ಯ ನಡೆಯುತ್ತಿದೆ’ ಎಂದು ಪತ್ರಕರ್ತ ಮನೋಹರ ಪ್ರಸಾದ್ ಅಭಿಪ್ರಾಯಪಟ್ಟರು.
ಇಲ್ಲಿ ಸೋಮವಾರ ಏರ್ಪಡಿಸಿದ್ದ ಯಕ್ಷ ಧ್ರುವ ಪ್ರತಿಷ್ಠಾನದ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಮಂಗಳೂರು ಘಟಕದ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ನಾಲ್ಕು ವಸಂತಗಳನ್ನು ಪೂರೈಸಿರುವ ಯಕ್ಷ ಧ್ರುವ ಪ್ರತಿಷ್ಠಾನವು ಇದುವರೆಗೆ ಸುಮಾರು 100 ಮಂದಿ ಯಕ್ಷಗಾನ ಕಲಾವಿದರಿಗೆ ಮನೆಗಳನ್ನು ಕಟ್ಟಿಕೊಟ್ಟಿದೆ. ಪ್ರತಿಷ್ಠಾನದ ಐದನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ 200ಕ್ಕೂ ಹೆಚ್ಚು ಕಲಾವಿದರು ಸ್ವಂತ ಮನೆಗಳನ್ನು ಹೊಂದುವಂತಾಗಲಿ‘ ಎಂದು ಅವರು ಹಾರೈಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕ್ರೆಡಾಯ್ ಮಂಗಳೂರು ಘಟಕದ ಅಧ್ಯಕ್ಷ ಪುಷ್ಪರಾಜ ಜೈನ್, ‘ಯಕ್ಷಗಾನ ಶ್ರೀಮಂತವಾದ ಕಲೆ. ಈ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಯಕ್ಷಧ್ರುವ ಪ್ರತಿಷ್ಠಾನದ 36 ಘಟಕಗಳ ಪಾತ್ರ ಮಹತ್ವಪೂರ್ಣವಾದುದು. ಈ ಕಲೆಯ ಉಳಿವಿಗಾಗಿ ಎಲ್ಲರೂ ತಮ್ಮಿಂದಾದ ಕೊಡುಗೆ ನೀಡಬೇಕು’ ಎಂದರು.
ಪ್ರತಿಷ್ಠಾನದ ಮಂಗಳೂರು ಘಟಕದ ನೂತನ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಅವರಿಗೆ ನಿಕಟ ಪೂರ್ವ ಅಧ್ಯಕ್ಷ ಪ್ರದೀಪ ಆಳ್ವ ಅಧಿಕಾರ ಹಸ್ತಾಂತರಿಸಿದರು.
ತಾರಾನಾಥ ಶೆಟ್ಟಿ ಮಾತನಾಡಿ, ‘ನನ್ನ ಕಾರ್ಯಾವಧಿಯಲ್ಲಿ ಪ್ರತಿಷ್ಠಾನದ ಗೌರವಕ್ಕೆ ಚ್ಯುತಿ ಬಾರದಂತೆ ಪಾರದರ್ಶಕವಾಗಿ ಕೆಲಸ ನಿರ್ವಹಿಸುತ್ತೇನೆ. ಪ್ರತಿಷ್ಠಾನದ ವತಿಯಿಂದ ಮತ್ತೆ 100 ಕಲಾವಿದರಿಗೆ ಮನೆ ನಿರ್ಮಿಸುವ ಯೊಜನೆಗೆ ಮಂಗಳೂರು ಘಟಕವೂ ಹೆಗಲು ಕೊಡಲಿದೆ’ ಎಂದರು.
ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.