ಉಳ್ಳಾಲ: ಯಕ್ಷಗಾನ ಕಲೆಗೆ ವಿಶೇಷ ಉತ್ತೇಜನವಿದೆ. ಮೂಡಲಪಾಯ ಕಲೆಗಳು ಹೊಸ ತಲೆಮಾರಿನ ನಿರ್ಲಕ್ಷ್ಯದಿಂದ ಹಿನ್ನಡೆ ಅನುಭವಿಸುತ್ತಿದೆ. ಆದರೆ ಯಕ್ಷಗಾನದ ಸುಯೋಗವೆಂದರೆ ಎಂಜಿನಿಯರ್, ಡಾಕ್ಟರ್, ಶಿಕ್ಷಕರು ಮೊದಲಾದ ವಿವಿಧ ಕ್ಷೇತ್ರಗಳ ಆಸಕ್ತರ ಮೂಲಕ ಸಮೃದ್ಧವಾಗಿ ಬೆಳೆಯುತ್ತಿದೆ. ವಿದ್ಯಾವಂತರು ಸೃಜನಶೀಲತೆಗೆ ಒತ್ತು ಕೊಡುವಂತೆ ಪರಂಪರೆಯನ್ನೂ ಉಳಿಸಿಕೊಳ್ಳಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಮಂಗಳೂರು ವಿವಿಯ ಡಾ.ಯು.ಆರ್ ರಾವ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಬನಾರಿ, ಪ್ರೊ.ಸಾಮಗ, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರಿಗೆ 2024-25ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಪ್ರದಾನ ಹಾಗೂ ಅಶೋಕ ಹಾಸ್ಯಗಾರ ಅವರ ದಶರೂಪಕಗಳ ದಶಾವತಾರ ಕೃತಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಅಭಿನಂದನ ಭಾಷಣ ಮಾಡಿದ ಪ್ರೊ.ಕೆ.ಚಿನ್ನಪ್ಪಗೌಡ, ರಮಾನಂದ ಬನಾರಿ ಮತ್ತು ಪ್ರೊ.ಎಂ.ಎಲ್ ಸಾಮಗ ಅವರು ಯಕ್ಷಗಾನದ ಅಧ್ಯಯನ ಮತ್ತು ವಿಸ್ತರಣೆಗೆ ಕೊಡುಗೆ ನೀಡಿದ್ದಾರೆ. ಬಣ್ಣದ ಮಾಲಿಂಗರ ಬಣ್ಣದ ವೇಷದ ಸೌಂದರ್ಯವನ್ನು ವರ್ತಮಾನದಲ್ಲಿ ಸೃಜನಶೀಲತೆಯೊಂದಿಗೆ ತಂದ ಕಲಾವಿದರು ಸದಾಶಿವ ಶೆಟ್ಟಿಗಾರ್ ಸಿದ್ಧಕಟ್ಟೆ ಎಂದರು.
ಅಶೋಕ ಹಾಸ್ಯಗಾರರ ದಶರೂಪಕಗಳ ದಶಾವತಾರ ಕೃತಿ ಯಕ್ಷಗಾನವನ್ನು ಶಾಸ್ತ್ರೀಯ ಚೌಕಟ್ಟಿನಲ್ಲಿ ನೋಡುವ ಪ್ರಯತ್ನ ಎಂದರು.
ಮಂಗಳೂರು ವಿವಿ ಕುಲಸಚಿವ ರಾಜು ಮೊಗವೀರ ಮಾತನಾಡಿ, ಯಕ್ಷಗಾನ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಪರಿಚಯ ಮಾಡಿಕೊಡಬೇಕಾಗಿದೆ ಎಂದರು.
ವಿದ್ವಾಂಸ ಪಾದೆಕಲ್ಲು ವಿಷ್ಣುಭಟ್ ಉಪಸ್ಥಿತರಿದ್ದರು. ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರದ ಸಂಶೋಧನಾ ಅಧಿಕಾರಿ ಸತೀಶ್ ಕೊಣಾಜೆ ವಂದಿಸಿದರು. ಯಕ್ಷಮಂಗಳ ವಿದ್ಯಾರ್ಥಿನಿ ಸಾಯಿಸುಮ ನಾವಡ ನಿರೂಪಿಸಿದರು.
ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಕೇಂದ್ರವು ವಿನೂತನ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಎಲ್ಲರನ್ನು ಒಂದುಗೂಡಿಸುವ ಗುಣ ಯಕ್ಷಗಾನ ಕಲೆಗಿದೆ.
- ಪ್ರೊ.ಪಿ.ಎಲ್. ಧರ್ಮಮಂಗಳೂರು ವಿವಿ ಕುಲಪತಿ
ಯಕ್ಷ ನಿರೂಪಣೆ ಮತ್ತು ಗಣಪತಿ ಕೌತುಕ ಇಡೀ ಕಾರ್ಯಕ್ರಮವನ್ನು ಕಲಾವಿದೆ ಸಾಯಿಸುಮ ನಾವಡ ಯಕ್ಷಗಾನದ ಅರ್ಥಗಾರಿಕೆ ಶೈಲಿಯಲ್ಲಿ ನಿರೂಪಣೆ ನಡೆಸಿದ್ದು ವಿಶೇಷ ಗಮನ ಸೆಳೆಯಿತು. ಕಾರ್ಯಕ್ರಮದ ಉದ್ದಕ್ಕೂ ನಡುನಡುವೆ ಯಕ್ಷಗಾನದ ಹಾಡುಗಳನ್ನು ದೀವಿತ್ ಶ್ರೀಧರ ಕೋಟ್ಯಾನ್ ರಚಿಸಿದ ಅಭಿನಂದನಾ ಗೀತೆಯನ್ನು ಗಾಯಕ ಮನ್ವಿತ್ ಇರಾ ಹಾಡಿದರು. ಹಿಮ್ಮೇಳದಲ್ಲಿ ಕೌಶಿಕ್ ಪುತ್ತಿಗೆ ಸ್ಕಂದ ಕೊನ್ನಾರ್ ಮತ್ತು ಹರಿಶ್ಚಂದ್ರ ನಾಯ್ಗ ಸಹಕರಿಸಿದ್ದರು. ಯಕ್ಷಮಂಗಳ ತಂಡಗಳಾದ ವಿದ್ಯಾರ್ಥಿಗಳಾದ ಶ್ರೇಯಸ್ ಮಹೇಶ್ ಶೆಟ್ಟಿ ಸುವರ್ಣ ಅವರಿಂದ ಪೂರ್ವರಂಗದ ಭಾಗವಾದ ಗಣಪತಿ ಕೌತುಕ ಪ್ರಸ್ತುತಪಡಿಸಲಾಯಿತು. ಕಾಸರಗೋಡಿಗೆ ಪ್ರಾತಿನಿಧ್ಯ ಸಿಗಲಿ: ಯಕ್ಷಮಂಗಳ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಮಾನಂದ ಬನಾರಿ ಕಾಸರಗೋಡಿನ ಮಣ್ಣು ಅಚ್ಚಗನ್ನಡದ ನೆಲ. ಅಲ್ಲಿಂದ ನನ್ನನ್ನು ಪ್ರಶಸ್ತಿಗೆ ಗುರುತಿಸಿದ್ದು ಕಾಸರಗೋಡಿಗೆ ಸಂದ ಗೌರವ. ಕರ್ನಾಟಕದ ಅಕಾಡೆಮಿಗಳಿಗೆ ಇತರೆ ಪ್ರಶಸ್ತಿಗಳಿಗೆ ಕಾಸರಗೋಡಿಗೆ ಪ್ರಾತಿನಿಧ್ಯ ಸಿಗಬೇಕು ಅಂದರು. ಡಾ.ಎಂ.ಎಲ್ ಸಾಮಗ ಮತ್ತು ಅಶೋಕ ಹಾಸ್ಯಗಾರರು ಕೃತಜ್ಞತೆ ಸೂಚಿಸಿದರು. ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.