ADVERTISEMENT

ಯಕ್ಷಗಾನ ಪಾರಂಪರಿಕ ಕಲೆ: ಪ್ರೊ.ಪಿ.ಎಸ್.ಯಡಪಡಿತ್ತಾಯ

‘ಯಕ್ಷಮಾರ್ಗಮುಕುರ’ ಕೃತಿಯ ಅವಲೋಕನ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2022, 6:20 IST
Last Updated 24 ಡಿಸೆಂಬರ್ 2022, 6:20 IST
ಮಂಗಳೂರು‌ ವಿವಿಯ ಯಕ್ಷಗಾನ ಕಲಾಕೇಂದ್ರದಲ್ಲಿ ‘ಯಕ್ಷಮಾರ್ಗಮುಕುರ’ ಅವಲೋಕನ - ಪ್ರಾತ್ಯಕ್ಷಿಕೆ ಕಮ್ಮಟ ಕಾರ್ಯಕ್ರಮವನ್ನು ಪ್ರೊ.ಯಡಪಡಿತ್ತಾಯ ಕಾರ್ಯಕ್ರಮ ಉದ್ಘಾಟಿಸಿದರು.
ಮಂಗಳೂರು‌ ವಿವಿಯ ಯಕ್ಷಗಾನ ಕಲಾಕೇಂದ್ರದಲ್ಲಿ ‘ಯಕ್ಷಮಾರ್ಗಮುಕುರ’ ಅವಲೋಕನ - ಪ್ರಾತ್ಯಕ್ಷಿಕೆ ಕಮ್ಮಟ ಕಾರ್ಯಕ್ರಮವನ್ನು ಪ್ರೊ.ಯಡಪಡಿತ್ತಾಯ ಕಾರ್ಯಕ್ರಮ ಉದ್ಘಾಟಿಸಿದರು.   

ಮುಡಿಪು: ಯಕ್ಷಗಾನವು ಪಾರಂಪರಿಕ ಕಲೆ. ಯಕ್ಷಗಾನವು ಪ್ರದರ್ಶನದೊಂದಿಗೆ ಅಧ್ಯಯನ, ವಿಚಾರ ಸಂಕಿರಣಗಳು, ಪ್ರಾತ್ಯಕ್ಷಿಕೆ, ಅವಲೋಕನ, ಕಮ್ಮಟದಂತಹ ಕಾರ್ಯಕ್ರಮಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆಯುತ್ತಿರುವುದು ಕಲೆಯು ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳಗಂಗೋತ್ರಿ ಹಾಗೂ ಕುರಿಯ ವಿಠಲಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಡಾ.ಮನೋರಮಾ ಬಿ.ಎನ್. ಅವರ ಕೃತಿ ‘ಯಕ್ಷಮಾರ್ಗಮುಕುರ’ ಅವಲೋಕನ - ಪ್ರಾತ್ಯಕ್ಷಿಕೆ ಕಮ್ಮಟ ಕಾರ್ಯಕ್ರಮವನ್ನು ಶುಕ್ರವಾರ ಮಂಗಳೂರು‌ ವಿವಿಯ ಯಕ್ಷಗಾನ ಕಲಾಕೇಂದ್ರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಲೇಖಕಿ, ಕಲಾ ಸಂಶೋಧಕರೂ ಆಗಿರುವ ಡಾ.ಮನೋರಮಾ ಅವರ ‘ಯಕ್ಷಮಾರ್ಗಮುಕುರ’ ಒಂದು ಮೌಲಿಕ ಕೃತಿಯಾಗಿದ್ದು, ಸಂಶೋಧನೆಯ ಹೊಸ ಮಜಲುಗಳನ್ನು ತೆರದಿಟ್ಟಿದೆ ಎಂದರು.

ADVERTISEMENT

ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅವರು ‘ಪ್ರವೇಶ-ಸ್ವರೂಪ-ಮಹತ್ವ’ ವಿಷಯದ ಬಗ್ಗೆ ಮಾತನಾಡಿದರು, ಕಲಾವಿದ ಪ್ರೊ.ಎಂ.ಎಲ್ ಸಾಮಗ ಅವರು ‘ಆಕರ-ಅನ್ವಯ-ವಿಧಾನ’ ಎಂಬ ವಿಷಯದಲ್ಲಿ ಹಾಗೂ ‘ಪರಿಕಲ್ಪನೆ-ಅಧ್ಯಯನ-ಕ್ಷೇತ್ರಕಾರ್ಯ’ ಎಂಬ ವಿಷಯದಲ್ಲಿ ಕಲಾ ಸಂಶೋಧಕ ಡಾ.ಮನೋರಮಾ ಬಿ. ಎನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಂ.ಪ್ರಭಾಕರ ಜೋಶಿ ಹಾಗೂ ಹಿರಿಯ ಕಲಾವಿದರಾದ ಕೆ.ಗೋವಿಂದ ಭಟ್ ಅವರನ್ನು ಗೌರವಿಸಲಾಯಿತು.

ಕಲಾ ಸಂಶೋಧಕರು ಮತ್ತು ತಜ್ಞ ಕಲಾವಿದರಿಂದ ಪ್ರಾತ್ಯಕ್ಷಿಕೆ ಕಮ್ಮಟ ನಡೆಯಿತು. ಹಿಮ್ಮೇಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಪದ್ಮನಾಭ ಉಪಾಧ್ಯಾಯ, ಮುರಾರಿ ಕಡಂಬಳಿತ್ತಾಯ, ಮುಮ್ಮೇಳದಲ್ಲಿ ದಿವಾಣ ಶಿವಶಂಕರ ಭಟ್, ರಂಜಿತಾ ಎಲ್ಲೂರು ಭಾಗವಹಿಸಿದ್ದರು.

ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಸಮಾರೋಪ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು. ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ.ಶ್ರೀಪತಿ ಕಲ್ಲೂರಾಯ ಸ್ವಾಗತಿಸಿದರು. ಉಜಿರೆ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನ ಕೇಂದ್ರದ ಸಂಶೋಧನಾ ಅಧಿಕಾರಿ ಡಾ.ಸತೀಶ್ ವಂದಿಸಿದರು. ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.