ಮಂಗಳೂರು: ನಗರದ ಪಾಂಡೇಶ್ವರದ ಶ್ರೀನಿವಾಸ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್ನಲ್ಲಿ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಅಂತರ ರಾಷ್ಟ್ರೀಯ ಯೋಗ ದಿನವನ್ನು ಶನಿವಾರ ಆಚರಿಸಲಾಯಿತು.
ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಸ್. ಐತಾಳ್ ಮಾತನಾಡಿ, ಯೋಗದಿಂದ ಎಲ್ಲ ರೀತಿಯ ರೋಗಗಳನ್ನು ತಡೆಯಬಹುದು. ಇದರಿಂದ ವ್ಯಕ್ತಿಯೊಬ್ಬನ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುವ ಮೂಲಕ ಕೊರೊನಾ ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರಪಂಚದ ಎಲ್ಲ ಜನರು ಭಾರತೀಯ ಯೋಗವನ್ನು ಸ್ವೀಕರಿಸಿ ಅನುಸರಿಸುತ್ತಿರುವುದು ಭಾರತೀಯರಿಗೆ ಹೆಮ್ಮೆ ತಂದಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಕದ್ರಿ ಕೈಬಟ್ಟಲಿನ ಪ್ರಕೃತಿ ಯೋಗ ಕುಟೀರದ ಸ್ಥಾಪಕ ನಿರ್ದೇಶಕ ರಾಧಾಕೃಷ್ಣ ಗುರೂಜಿ, ಓಕಾಂರದೊಂದಿಗೆ ವಿವಿಧ ಆಸನಗಳು ಮತ್ತು ಅದರ ಪ್ರಯೋಜನ ಹಾಗೂ ಮಹತ್ವಗಳನ್ನು ತಿಳಿಸಿದರು.
ಕುಲಸಚಿವ ಡಾ. ಅಜಯ್ ಕುಮಾರ್, ಕಾಲೇಜ್ ಆಫ್ ಫಿಸಿಯೋಥೆರಪಿಯ ಡೀನ್ ಡಾ.ಎಸ್. ರಾಜಶೇಖರ್ ಹಾಗೂ ಸಿಟಿ ಕ್ಯಾಂಪಸ್ನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.
ಆನ್ಲೈನ್ನಲ್ಲಿ ಯೋಗ ದಿನಾಚರಣೆ ಇಂದು
ಮಂಗಳೂರಿನ ಶಕ್ತಿ ಶಿಕ್ಷಣ ಸಂಸ್ಥೆಯಿಂದ ಅಂತರ ರಾಷ್ಟ್ರೀಯ ಯೋಗ ದಿನವನ್ನು ಭಾನುವಾರ (ಇದೇ 21) ಬೆಳಿಗ್ಗೆ 8 ಗಂಟೆಗೆ ಆನ್ಲೈನ್ನಲ್ಲಿ ಆಚರಿಸಲಾಗುವುದು.
ಯೋಗ ತರಬೇತಿಯನ್ನು ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಯೋಗ ತರಬೇತುದಾರ ಪ್ರವೀಣ್ ನಡೆಸಿ ಕೊಡಲಿದ್ದಾರೆ. ಶಕ್ತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಂಜೀತ್ ನಾಯಕ, ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ಶಾಲೆ ಮತ್ತು ಶಕ್ತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕರು ಮತ್ತು ಸಿಬ್ಬಂದಿ ಭಾಗವಹಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.