ADVERTISEMENT

ಏಕಾಗ್ರತೆ ಸಾಧಿಸಲು ಯೋಗ ಅಡಿಗಲ್ಲು: ಸೋಮಶೇಖರ ನಾಯಕ್

ಎಸ್ಎಸ್‌ಬಿಯುನಲ್ಲಿ 1100 ವಿದ್ಯಾರ್ಥಿಗಳಿಂದ ಯೋಗಾಭ್ಯಾಸ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 12:41 IST
Last Updated 21 ಜೂನ್ 2025, 12:41 IST
ಸುಬ್ರಹ್ಮಣ್ಯದ ಎಸ್ಎಸ್‌ಬಿಯು ಕಾಲೇಜಿನಲ್ಲಿ 1100 ವಿದ್ಯಾರ್ಥಿಗಳು ಏಕ ಕಾಲದಲ್ಲಿ ಯೋಗಾಭ್ಯಾಸ ಮಾಡಿದರು
ಸುಬ್ರಹ್ಮಣ್ಯದ ಎಸ್ಎಸ್‌ಬಿಯು ಕಾಲೇಜಿನಲ್ಲಿ 1100 ವಿದ್ಯಾರ್ಥಿಗಳು ಏಕ ಕಾಲದಲ್ಲಿ ಯೋಗಾಭ್ಯಾಸ ಮಾಡಿದರು   

ಸುಬ್ರಹ್ಮಣ್ಯ: ಚಿತ್ತ ಚಾಂಚಲ್ಯವನ್ನು ಹೋಗಲಾಡಿಸಲು ಯೋಗ ಪ್ರಧಾನ. ಯೋಗವು ಸರ್ವರೋಗ ನಿವಾರಕವಾಗಿದೆ. ಸಮಚಿತ್ತ ಮತ್ತು ದೈಹಿಕ ಸಮತೋಲನಕ್ಕೆ ಯೋಗ ಅಸ್ತ್ರವಾಗಿದೆ. ಏಕಾಗ್ರತೆಯೊಂದಿಗೆ ಮಾನಸಿಕ ಸದೃಢತೆ ಸಾಧಿಸಲು ಯೋಗ ಅಡಿಗಲ್ಲು. ಯೋಗದಿಂದ ರೋಗವಿಲ್ಲ. ಹಾಗಿ ಎಳೆಯ ವಯಸ್ಸಿನಲ್ಲೇ ಪ್ರತಿದಿನ ಯೋಗಾಭ್ಯಾಸ ಮಾಡಬೇಕು ಎಂದು ಎಸ್‌ಎಸ್ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು.

ಮಹತೋಭಾರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್ಎಸ್‌ಬಿಯು ಕಾಲೇಜಿನಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಸಹಯೋಗದಲ್ಲಿ ವಿಶ್ವಯೋಗ ದಿನಾಚರಣೆಯ ಅಂಗವಾಗಿ ನಡೆದ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯೋಗಾಭ್ಯಾಸದಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ನಿರ್ಮಲ ಚಿತ್ತವು ರೂಪಿತವಾಗುತ್ತದೆ. ಇದರಿಂದ ವ್ಯಕ್ತಿಯ ಮಾನಸಿಕ ಆರೋಗ್ಯ ದೃಢಗೊಳ್ಳುತ್ತದೆ. ಪತಂಜಲಿ ಮುನಿಯಿಂದ ಭಾರತದಲ್ಲಿ ಆರಂಭವಾದ ಯೋಗ ಇಂದು ವಿಶ್ವವ್ಯಾಪಿಯಾಗಿದೆ. ಯೋಗವು ಭಾರತವು ವಿಶ್ವಕ್ಕೆ ನೀಡಿದ ದೊಡ್ಡ ಕೊಡುಗೆಯಾಗಿದೆ. ಇದೀಗ ವಿಶ್ವಾದ್ಯಂತ ಯೋಗದ ಕುರಿತು ತಿಳಿಯಲು ಹಾಗೂ ಆರೋಗ್ಯವಂತ ಪ್ರಪಂಚ ಸೃಷ್ಟಿಗೆ ವಿಶ್ವಯೋಗ ದಿನಾಚರಣೆ ಬುನಾದಿಯಾಗಿದೆ ಎಂದರು.

ADVERTISEMENT

ಕಾಲೇಜಿನ ಮೇಲ್ಬಾಗದ ಕ್ರೀಡಾಂಗಣ ಮತ್ತು ಕೆಳಭಾಗದ ಕ್ರೀಡಾಂಗಣದಲ್ಲಿ ಒಟ್ಟು 1100 ವಿದ್ಯಾರ್ಥಿಗಳು ಏಕಕಾಲದಲ್ಲಿ ಯೋಗಾಭ್ಯಾಸ ಮಾಡಿದರು. ಯೋಗ ಗುರುಗಳಾದ ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್, ಉಪನ್ಯಾಸಕಿ ಸೌಮ್ಯಾ ದಿನೇಶ್ ಯೋಗಾಭ್ಯಾಸ ಮಾಡಿಸಿದರು. ಆರಂಭದಲ್ಲಿ ಯೋಗ ಮಂತ್ರ, ಪತಂಜಲಿ ಸ್ಮರಣಾ ಮಂತ್ರ ಪಠಿಸಲಾಯಿತು. ಬಳಿಕ ವೃಕ್ಷಾಸನ, ಪದ್ಮಾಸನ, ಮಂತ್ರ ಸಹಿತ ಸೂರ್ಯ ನಮಸ್ಕಾರ, ಭುಜಂಗಾಸನ, ಸರ್ವಾಂಗಾಸನ ಸೇರಿದಂತೆ ವಿವಿಧ ಆಸನಗಳನ್ನು ಸುಮಾರು 1 ಗಂಟೆಗಳ ಕಾಲ ಮಾಡಿದರು.

ಯೋಗಾಭ್ಯಾಸ ಆರಂಭವಾಗಿ ಒಂದು ತಾಸಿನ ನಂತರ ಉಂಟಾದ ತುಂತುರು ಮಳೆಯ ನಡುವೆಯೂ ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡಿದರು. ಅಂತಿಮವಾಗಿ ಯೋಗವನ್ನು ದಿನಚರಿಯನ್ನಾಗಿ ಪ್ರತಿದಿನ ಮಾಡುವ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳು ಸ್ವೀಕರಿಸಿದರು.

ಸುಬ್ರಹ್ಮಣ್ಯ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಜಯಪ್ರಕಾಶ್.ಆರ್, ಪೂರ್ವಾಧ್ಯಕ್ಷ ಲೋಕೇಶ್ ಬಿ.ಎನ್, ನಿರ್ದೇಶಕ ಗಿರೀಶ್, ಪ್ರೌಢಶಾಲಾ ಮುಖ್ಯಶಿಕ್ಷಕಿ ನಂದಾ ಹರೀಶ್, ಆಯ್ಕೆಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್ ಹಾಜರಿದ್ದರು.

ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ನಾಯಕರಾದ ಸವಿತಾ ಕೈಲಾಸ್ ಮತ್ತು ಪ್ರವೀಣ್ ಎರ್ಮಾಯಿಲ್ ನಿರ್ದೇಶನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೊನೆಯಲ್ಲಿ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಯೋಗ ನೃತ್ಯ ಪ್ರದರ್ಶಿಸಿದರು.

ಸುಬ್ರಹ್ಮಣ್ಯದ ಎಸ್ಎಸ್ಪಿಯು ಕಾಲೇಜಿನಲ್ಲಿ 1100 ವಿದ್ಯಾಥರ್ಿಗಳು ಏಕ ಕಾಲದಲ್ಲಿ  ಯೋಗಾಸನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.