ADVERTISEMENT

ಬಿಜೆಪಿಯಿಂದ ಯುವಕರು ಭ್ರಮನಿರಸನ: ರಕ್ಷಾ ರಾಮಯ್ಯ

ವಿಧಾನಸಭಾ ಕ್ಷೇತ್ರವಾರು ಯುವ ಕಾಂಗ್ರೆಸ್ ಸದಸ್ಯ ನೋಂದಣಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 7:02 IST
Last Updated 14 ಜುಲೈ 2021, 7:02 IST
ಮಂಗಳೂರಿನ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು.
ಮಂಗಳೂರಿನ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು.   

ಮಂಗಳೂರು: ಯುವಜನರಿಗೆ ಬಿಜೆಪಿಯ ನಿಜವಾದ ಬಣ್ಣ ಇದೀಗ ತಿಳಿಯುತ್ತಿದೆ. ಅವರು ಬಿಜೆಪಿ ಸರ್ಕಾರ ದಿಂದ ಭ್ರಮನಿರಸನ ಗೊಂಡಿದ್ದು, ಯುವ ಕಾಂಗ್ರೆಸ್‌ ವಿಧಾನಸಭಾ ಕ್ಷೇತ್ರವಾರು ಯುವ ಕಾಂಗ್ರೆಸ್‌ ಸದಸ್ಯತ್ವ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಿದೆ ಎಂದು ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಕ್ಷಾ ರಾಮಯ್ಯ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕ್ಕಾಗಿ ₹50 ರಿಂದ ₹60 ಕೋಟಿ ವರೆಗೆ ಸುರಿದಿದೆ. ಅದರಿಂದ ಬಿಜೆಪಿಗೆ ಅನಿರೀಕ್ಷಿತ ಫಲಿತಾಂಶ ಬಂದಿರ ಬಹುದು. ಆದರೆ, ಅದು ಶಾಶ್ವತವಲ್ಲ. ಬಿಜೆಪಿಯ ಕಾರ್ಯವೈಖರಿಯು ಏನೆಂಬುದು ಜನಸಾಮಾನ್ಯರಿಗೆ ಅರ್ಥವಾಗುತ್ತಿದೆ ಎಂದು ಹೇಳಿದರು.

ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ರಾಜ್ಯದಾದ್ಯಂತ ಅವಿರತ ಶ್ರಮವಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್‌ನಿಂದ ಸಹಾಯವಾಣಿ ಆರಂಭಿಸಿ, ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ಜಿಲ್ಲೆಯ ಸಹಾಯವಾಣಿಗೆ 2,322 ಕರೆಗಳು ಬಂದಿದ್ದು, 240 ಜನರಿಗೆ ಐಸಿಯು ಹಾಸಿಗೆಗಳ ವ್ಯವಸ್ಥೆಯನ್ನು ಪಕ್ಷದ ಸಹಾಯವಾಣಿ ವತಿಯಿಂದ ಮಾಡಲಾಗಿದೆ. 163 ಜನರಿಗೆ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಂದರ್ಭದಲ್ಲಿ ಸಹಾಯ ನೀಡಲಾಗಿದೆ. 48 ರೋಗಿಗಳಿಗೆ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದೆ. 319 ಜನರಿಗೆ ಆಂಬುಲೆನ್ಸ್‌ ಸೌಕರ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಾರಿಯರ್‌ಗಳಿಗೆ ಸನ್ಮಾನ: ಯುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಕ್ಷಾ ರಾಮಯ್ಯ ಭೇಟಿ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಕೋವಿಡ್ ವಾರಿಯರ್‌ಗಳಿಗೆ ಸನ್ಮಾನ ಕಾರ್ಯಕ್ರಮ ಮಂಗಳವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ನಡೆಯಿತು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು. ರಕ್ಷಾ ರಾಮಯ್ಯ ಅವರು ಕೋವಿಡ್ ಸಂದರ್ಭದಲ್ಲಿ ದುಡಿದ ಯುವ ಕಾಂಗ್ರೆಸ್‌ನ ವಾರಿಯರ್‌ಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಹರೀಶ್ ಕುಮಾರ್, ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಕುಮಾರ್ ಯಾದವ್, ಸುರಭಿ ದ್ವಿವೇದಿ, ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ವಿದ್ಯಾ ಬಾಲಕೃಷ್ಣನ್, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಶಾಹುಲ್ ಹಮೀದ್, ಯುವ ಕಾಂಗ್ರೆಸ್ ರಾಜ್ಯ ಘಟಕದ ಉಪಾಧ್ಯಕ್ಷೆ ಭವ್ಯಾ, ಪ್ರಧಾನ ಕಾರ್ಯದರ್ಶಿಗಳಾದ ದೀಪಿಕಾ ರೆಡ್ಡಿ, ಮೆರಿಲ್ ರೇಗೊ, ಕಾರ್ಯದರ್ಶಿಗಳಾದ ಮನ್ನಾರ್ ಮನ್ನಾನ್, ಆಶಿತ್ ಪಿರೇರಾ, ಸರ್ಫಾಝ್ ನವಾಝ್, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಿಥುನ್ ರೈ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು. ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಸ್ವಾಗತಿಸಿದರು. ರಝಾಕ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.