ಉಳ್ಳಾಲ: ಉತ್ತರ ಪ್ರದೇಶದ ಯೋಯ್ಡಾದ ಅಮಿಟಿ ವಿಶ್ವವಿದ್ಯಾಲಯದಲ್ಲಿ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಸ್ (ಎಐಯು) ವತಿಯಿಂದ ಆಏರ್ಪಡಿಸಿದ್ದ ರಾಷ್ಟ್ರಮಟ್ಟದ ಅಂತರವಿಶ್ವವಿದ್ಯಾಲಯ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡ ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಸ್ಪಾಟ್ ಫೊಟೊಗ್ರಫಿ, ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ, ಕಿರುನಾಟಕದಲ್ಲಿ ದ್ವಿತೀಯ, ಶಾಸ್ತ್ರೀಯ ತಾಳವಾದ್ಯ (ವೈಯುಕ್ತಿಕ), ಜನಪದ ನೃತ್ಯ– ತೃತೀಯ, ಭಾರತೀಯ ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಸಂಗೀತ (ಹಿಂದೂಸ್ಥಾನಿ/ಕರ್ನಾಟಕ್), ಶಾಸ್ತ್ರೀಯ ಸ್ವರ ವಾದ್ಯ (ವೈಯಕ್ತಿಕ), ಭಾರತೀಯ ಲಘು ಸಂಗೀತದಲ್ಲಿ ದ್ವಿತೀಯ ಸ್ಥಾನ, ಜನಪದ ಸಂಗೀತ ಮೇಳದಲ್ಲಿ ಪ್ರಥಮ, ಸಮೂಹಗಾನ (ಭಾರತೀಯ) 5ನೇ ಸ್ಥಾನ ಗೆದ್ದುಕೊಂಡಿದೆ.
ಸಾಂಸ್ಕೃತಿಕ ಮೆರವಣಿಗೆಯಲ್ಲಿ 4ನೇ ಸ್ಥಾನ ಗಳಿಸಿದೆ. ದೇಶದ 152 ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಆಳ್ವಾಸ್ ಕಾಲೇಜು ಮೂಡುಬಿದಿರೆ, ಗೋವಿಂದ ದಾಸ ಕಾಲೇಜು ಸುರತ್ಕಲ್, ಕೆನರಾ ಕಾಲೇಜು ಮಂಗಳೂರು, ಮಂಗಳಗಂಗೋತ್ರಿ ಕ್ಯಾಂಪಸ್ನ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಪ್ರಶಾಂತ ನಾಯ್ಕ, ಲವೀನಾ ಕೆ.ಬಿ., ವೆಂಕಟೇಶ್ ಎಚ್.ಎಸ್. (ಟೀಮ್ ಮ್ಯಾನೆಜರ್) ಮಂಗಳೂರು ವಿಶ್ವವಿದ್ಯಾನಿಲಯ ತಂಡದ ನೇತೃತ್ವ ವಹಿಸಿದ್ದರು.
ವಿದ್ಯಾರ್ಥಿಗಳು, ಪಕ್ಕವಾದ್ಯದವರು ಸೇರಿ 38 ಮಂದಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಮುಂದಿನ ಹಂತವಾಗಿ, ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ಅಂತರಾಷ್ಟ್ರೀಯ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.