ಮಂಗಳೂರು: ನಗರದ ಸಂಗೀತ ಪರಿಷತ್ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಭಾರತೀಯ ವಿದ್ಯಾಭವನ ಸಹಯೋಗದಲ್ಲಿ ಆಯೋಜಿಸಿರುವ ಯುವ ಸಂಗೀತೋತ್ಸವ ಸೆಪ್ಟೆಂಬರ್ 25ರಂದು ನಡೆಯಲಿದೆ.
ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ದಿನವಿಡೀ ನಡೆಯಲಿರುವ ಕಾರ್ಯಕ್ರಮದಲ್ಲಿ ಸ್ಥಳೀಯ ಯುವ ಪ್ರತಿಭೆಗಳು ರಾಗ–ತಾಳ–ಲಯ ಲೋಕವನ್ನು ಸೃಷ್ಟಿಸಲಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿರುವ ಕಚೇರಿಯಲ್ಲಿ ಹರ್ಷಿತ್ ಕುಮಾರ್ ಸುರತ್ಕಲ್, ಶೋಭಿತಾ ಭಟ್ ಮತ್ತು ಆಶ್ವಿಜಾ ಉಡುಪ ಕಿನ್ನಿಗೋಳಿ, ಅಭಿಷೇಕ್ ಮಂಗಳೂರು ಹಾಗೂ ಉಜಿರೆಯ ಸರ್ವೇಶ್ ದೇವಸ್ಥಳಿ ಕಛೇರಿ ನೀಡಲಿದ್ದಾರೆ.
ಪಿಟೀಲಿನಲ್ಲಿ ಮಂಗಳೂರಿನ ಧನಶ್ರೀ ಶಭರಾಯ ಹಾಗೂ ಗೌತಮ್ ಭಟ್, ಮೃದಂಗದಲ್ಲಿ ಅವನೀಶ್ ಬೆಳ್ಳಾರೆ ಮತ್ತು ಪವನ್ ಪುತ್ತೂರು ಸಹಕರಿಸಲಿದ್ದಾರೆ. ಸಂಜೆ 5ಕ್ಕೆ ಕೇರಳದ ಕೊಚ್ಚಿಯ ಹರಿಪ್ರಸಾದ್ ಸುಬ್ರಮಣಿಯನ್ ಅವರ ಕೊಳಲು ವಾದನ ಇರುತ್ತದೆ. ಬೆಂಗಳೂರಿನ ವೈಭವ ರಮಣಿ (ಪಿಟೀಲು), ಚೆನ್ನೈನ ಹರಿಹರನ್ ಸುಂದರರಾಮನ್ (ಮೃದಂಗ) ಮತ್ತು ಮಂಗಳೂರಿನ ಸುಮುಖ ಕಾರಂತ (ಖಂಜೀರ) ಪಕ್ಕವಾದ್ಯ ನುಡಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶಾವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.